ಗುಬ್ಬಿ: ಉಪಚುನಾವಣೆ ಸ್ಥಳೀಯ ಹಾಗೂ ಪ್ರಸ್ತುತ ವಿಚಾರದ ಮೇಲೆ ನಡೆಯುತ್ತವೆ. ಸರ್ಕಾರಕ್ಕೂ ಈ ಚುನಾವಣೆಗೂ ಯಾವ ಸಂಬಂಧವಿಲ್ಲ. ಯಾವುದೇ ಪ್ರಭಾವ ಸಹ ಬೀರದು ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲೂಕಿನ ಕಡಬ ಹೋಬಳಿಯ ಹಲವು ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಸುಮಾರು 12 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಉಪ ಚುನಾವಣೆಯ ಫಲಿತಾಂಶ ಸೋಲು ಗೆಲುವು ಯಾವುದರಿಂದಲೂ ಸರ್ಕಾರಕ್ಕೆ ಯಾವ ಲಾಭ ನಷ್ಟವಿಲ್ಲ ಎಂದರು.
ಈ ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಚ್ಯುತಿ ಬರುವುದಿಲ್ಲ. ಪಕ್ಷದ ಹೈಕಮಾಂಡ್ ಮಾತ್ರ ಈ ಕೆಲಸ ಮಾಡಲು ಸಾಧ್ಯ. ಚುನಾವಣೆ ಎಫೆಕ್ಟ್ ಏನೂ ಇರುವುದಿಲ್ಲ. ರಾಜಕೀಯ ದಿಕ್ಸೂಚಿಯು ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಇರಾನ್ ಇಸ್ರೇಲ್ ಕದನ ವಿರಾಮ ಹೇಳಿಕೆ ಎಲ್ಲಿಯವರೆಗೆ ಎಂಬುದು ನೋಡಬೇಕಿದೆ. ಗ್ಯಾಸ್ ಅಭಾವ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ ಎಂದರು.
ಕಡಬ ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಭೂತ ವ್ಯವಸ್ಥೆಯ ಜೊತೆಗೆ ಮತ್ತಷ್ಟು ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸಲಾಗುವುದು. ಗುಬ್ಬಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ಸದ್ಯದಲ್ಲೇ ನೀಡಲಾಗುವುದು. ಈ ಜೊತೆಗೆ ಬಸ್ ಡಿಪೋ ಕಾಮಗಾರಿಗೂ ಶೀಘ್ರ ಗ್ರೀನ್ ಸಿಗ್ನಲ್ ಸಿಗಲಿದೆ ಎಂದ ಅವರು ಕಡಬದಲ್ಲಿ ಸವಿತಾ ಸಮಾಜದ ಸಮುದಾಯಭವನಕ್ಕೆ ಈಗಾಗಲೇ ಹತ್ತು ಲಕ್ಷ ನೀಡಲಾಗಿದೆ. ಬಾಕಿ 20 ಲಕ್ಷ ಮಂಜೂರು ಮಾಡಿ ಭವನ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಬೆಲವತ್ತ ಗ್ರಾಮದಲ್ಲಿ ಅಗತ್ಯವಿದ್ದ ಸ್ತ್ರೀಶಕ್ತಿ ಭವನಕ್ಕೆ 15 ಲಕ್ಷ ರೂಗಳನ್ನು ನೀಡಿ ಪೂಜೆ ಸಲ್ಲಿಸಲಾಗಿದೆ. ಅರೆಮಾರನಹಳ್ಳಿ ಮೂಲಕ ಕಾಡಶೆಟ್ಟಿಹಳ್ಳಿವರೆಗೆ ಕೆರೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣಕ್ಕೆ 7.80 ಕೋಟಿ ರೂ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಡಬ ಹಾಗೂ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣಕ್ಕೆ 4.70 ಕೋಟಿ ರೂಗಳ ಕಾಮಗಾರಿಗೂ ಇಂದು ಚಾಲನೆ ನೀಡಲಾಗಿದೆ ಎಂದು ಅಭಿವೃದ್ದಿ ಕಾಮಗಾರಿ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬೆಲವತ್ತ ಗ್ರಾಮದ ದಯಾನಂದ್, ಶಿವಕುಮಾರ್, ರಾಜಶೇಖರ್, ಕಡಬದ ರಾಜೇಶ್, ಬಾಲಕೃಷ್ಣ, ದಾಸರಕಲ್ಲಹಳ್ಳಿ ಲಕ್ಷ್ಮೀನಾರಾಯಣ್, ಲೋಕೋ ಪಯೋಗಿ ಇಲಾಖೆಯ ಎಇಇ ಯೋಗೀಶ್, ಗುತ್ತಿಗೆದಾರರಾದ ರಾಮಲಿಂಗೇಗೌಡ, ಕೃಷ್ಣೇಗೌಡ ಇತರರು ಇದ್ದರು.



