ಮಹಿಳೆಯರ ಆರೋಗ್ಯ ಸಂರಕ್ಷಣೆ ಮತ್ತು ಹೆರಿಗೆ ನಂತರದ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆ.ಎನ್.ಎಸ್.ಎಸ್ ಮಹಿಳಾ ವಿಭಾಗ ಮತ್ತು ಬಂಟ್ಸ್ ಅಲಿಯಾಸ್ ನಾಡವರ ಮಾತೃಸಂಘದ ಸಂಯುಕ್ತ ಆಶ್ರಯದಲ್ಲಿ ‘ಪ್ರಸವರಕ್ಷೆ’ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದೇರಳಕಟ್ಟೆಯ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾ ಪ್ರಭಾ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಮಂಗಳೂರು ತಾಲೂಕು ಬಂಟ್ಸ್ ಮಾತೃಸಂಘದ ಮಹಿಳಾ ವಿಭಾಗದ ಸಂಚಾಲಕಿ ಸವಿತಾ ಆರ್. ಶೆಟ್ಟಿ,ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸಂಚಾಲಕಿ ಶಾಲಿನಿ ಎಸ್. ಶೆಟ್ಟಿ ಹಾಗೂ ಕೆ.ಎನ್.ಎಸ್.ಎಸ್ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾ ವಿಜಯಕುಮಾರ್ ಉಪಸ್ಥಿತರಿದ್ದರು.
ಹೆರಿಗೆಯ ನಂತರ ಮಹಿಳೆಯರು ಎದುರಿಸುವ ದೈಹಿಕ ಮತ್ತು ಮಾನಸಿಕ ಸವಾಲುಗಳ ಕುರಿತು ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಘಾಟಕರು, “ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಆಯುರ್ವೇದ ಪದ್ಧತಿಯು ಅತ್ಯಂತ ಪರಿಣಾಮಕಾರಿಯಾಗಿದೆ. ಪ್ರಸವಾನಂತರದ ಕಾಲದಲ್ಲಿ ಮಹಿಳೆಯರು ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ” ಎಂದು ತಿಳಿಸಿದರು.
ಕಣಚೂರು ವೈದ್ಯಕೀಯ ಕಾಲೇಜಿನ ಡಾ. ನೀತು ದೇವ್ ಅವರು ಹೆರಿಗೆ ನಂತರದ ಆರೈಕೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೆ.ಎನ್.ಎಸ್.ಎಸ್ ಅಧ್ಯಕ್ಷ ಮುರಳಿ ನಾಯರ್ ಮತ್ತು ಕಾರ್ಯದರ್ಶಿ ಸತೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೆ.ಎನ್.ಎಸ್.ಎಸ್ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾ ವಿಜಯಕುಮಾರ್ ಸ್ವಾಗತಿಸಿದರು. ಡಾ. ಸಿಂಧು ಎಸ್. ಕಾರ್ಯಕ್ರಮ ನಿರೂಪಿಸಿದರು. ಮತ್ತು ಗೋಪಿಕಾ ರಾಣಿ ವಂದನಾರ್ಪಣೆ ಮಾಡಿದರು.



