ಹಾಸನ : ದಾವಣಗೆರೆ ಉಪ ಚುನಾವಣೆ ಸಂದರ್ಭ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ವೈಮನಸು ಮೂಡಿದ್ದು, ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಸಚಿವ ಜಮಿರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದರು.
ಹೀಗಾಗಿ ಜಮಿರ್ ಅಹ್ಮದ್ ಖಾನ್ ಕಾಂಗ್ರೆಸ್ ತೊರೆದು ವಾಪಸ್ ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಸಂಬಂಧ ಈಗಾಗಲೇ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು, ಇದೀಗ ಮತ್ತೊಮ್ಮೆ ಉತ್ತರಿಸಿದ್ದು, ಅಧಿಕಾರಕ್ಕಾಗಿ ಅಂತಹವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯ ನಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ .
ಹಾಸನದಲ್ಲಿ ಈ ಕುರಿತು ಮಾತನಾಡಿದ ಅವರು, ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ. ಅದರಲ್ಲೂ ಅಂತಹವರನ್ನು ಸೇರಿಸಿಕೊಳ್ಳುವ ಅವಶ್ಯಕತೆಯು ನಮಗೆ ಇಲ್ಲ. ಹೀಗಾಗಿ ಮತ್ತೆ ಈ ಕುರಿತು ಕೇಳಬೇಡಿ ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಆ ವಿಷಯವನ್ನು ನನ್ನಮುಂದೆ ಕೇಳಬೇಡಿ, ಅವರನ್ನು ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ, ಈಗಾಗಲೇ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಶಕ್ತಿ ಬರುತ್ತದೆ ಎಂದು ಹೇಳಿ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬದುಕುಳಿಯಲಿಕ್ಕೆ ನಾನು ಪಟ್ಟಿರೋ ಕಷ್ಟ, ನನಗೆ ಗೊತ್ತು. ಇವತ್ತು ನಾನು ಇಲ್ಲಿ ಬಂದು ನಿಂತಿರೋದಕ್ಕೆ ಭಗವಂತ ಕಾರಣ, ಆರೋಗ್ಯವಾಗಿ ಇಲ್ಲಿ ನಿಂತಿದ್ದಾನೆ ಎಂದರೆ ಭಗವಂತ ನನ್ನನ್ನ ಉಳಿಸಿದ್ದಾನೆ. ನನಗೆ ದೇವರು 5ನೇ ಬಾರಿ ಜೀವನ ಕೊಟ್ಟಿದ್ದಾನೆ. ನನಗಾದ ಅನುಭವ ನಿಮ್ಮ ಜೊತೆ ಹೇಳುತ್ತೇನೆ.ಬದುಕಲು ನಾನು ಎಷ್ಟು ದುಡ್ಡು ಖರ್ಚು ಮಾಡಿದ್ದೇನೋ ಗೊತ್ತಿಲ್ಲ. ಬಡವರು ಪಾಪ ಎಲ್ಲಿ ತರ್ತಾರೆ ಅಷ್ಟೊಂದು ಹಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.



