ಮಂಡ್ಯ : ಮಂಡ್ಯ ವಿಶ್ವವಿದ್ಯಾಲಯ ಮುಚ್ಚುಲು ಮುಂದಾಗಿರುವ ತಮ್ಮದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ. ಸಚಿವರನ್ನು ಮಂಡ್ಯ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಂಡ್ಯ ವಿಶ್ವವಿದ್ಯಾಲಯದಲ್ಲಿ ‘ನವವಸಂತ’ ಹೆಸರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರವಿಕುಮಾರ್ ಗೌಡ, ತಮ್ಮ ಭಾಷಣದಲ್ಲಿ ಯುನಿವರ್ಸಿಟಿ ಉಳಿವಿನ ವಿಷಯವನ್ನು ಮುನ್ನೆಲೆಗೆ ತಂದು ಮಂಡ್ಯ ಜನತೆಗೆ, ವಿದ್ಯಾರ್ಥಿಗಳಿಗೆ, ಹಾಗೂ ವಿಶ್ವವಿದ್ಯಾಲಯದ ಭವಿಷ್ಯಕ್ಕೆ ಇದು ಅತ್ಯಂತ ಸೂಕ್ಷ್ಮ ವಿಷಯ ಎಂದು ಸ್ಪಷ್ಟಪಡಿಸಿದರು.
ನಾನು ಶಾಸಕನಾಗಿ ಇರ್ತೀನೋ ಇಲ್ಲವೋ. ಆದರೆ ಮಂಡ್ಯ ವಿವಿ ಮುಚ್ಚಲು ಬಿಡಲ್ಲ. ಮತ್ತೆ ನೀವು ಮೈಸೂರಿನ ಗುಲಾಮರಾಗಿ ಇರಬೇಕೆ ಎಂದು ಪ್ರಶ್ನಿಸಿದ ಅವರು ನಮಗೆ ಸ್ವಂತ ವಿವಿ ಬೇಕು, ಇದು ಮಂಡ್ಯದ ಸ್ವಾಭಿಮಾನ ಎಂದು ಗುಡುಗಿದರು.
ಇನ್ನೂ ಯಾವುದೇ ಕಾರಣಕ್ಕೂ ಮಂಡ್ಯ ಯುನಿವರ್ಸಿಟಿ ಮುಚ್ಚಲು ಬಿಡುವುದಿಲ್ಲ ಎಂದು ಉಗ್ರ ಸ್ವರದಲ್ಲಿ ಘೋಷಿಸಿದ ಅವರು, ಯಾರು ಬಂದರೂ ಮಂಡ್ಯ ಯುನಿವರ್ಸಿಟಿ ಮುಚ್ಚಲು ಬಿಡಲ್ಲ. ಯುನಿವರ್ಸಿಟಿ ಮುಚ್ಚಲು ಬಂದರೆ ಬೆಂಕಿ ಹಚ್ಚಿಸುತ್ತೇವೆ ಎಂಬ ಪದಗಳನ್ನು ಬಳಸಿದ ಅವರು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಬರುವ ಯಾವುದೇ ಕ್ರಮವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಮಂಡ್ಯ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವುದು ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳ ಹಕ್ಕು, ಅವರ ಭವಿಷ್ಯ, ಮತ್ತು ಜಿಲ್ಲೆಯ ಗೌರವಕ್ಕೆ ಸಂಬಂಧಪಟ್ಟ ವಿಷಯ ಎಂದು ಶಾಸಕ ರವಿಕುಮಾರ್ ಗೌಡ ತಮ್ಮ ಭಾಷಣದ ಮೂಲಕ ಸ್ಪಷ್ಟಪಡಿಸಿದರು.
ವಿಶ್ವವಿದ್ಯಾಲಯ ಮುಚ್ಚುವ ಕಲ್ಪನೆಯೇ ತಪ್ಪು, ಇಂಥ ಮಾತುಗಳು ಕೂಡ ಬರಬಾರದು, ಇವು ಜನರ ಮನಸ್ಸಿನಲ್ಲಿ ಗೊಂದಲ ಹಾಗೂ ಅಶಾಂತಿ ಸೃಷ್ಟಿಸುತ್ತವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಕೆಲ ದಿನಗಳ ಹಿಂದೆ ಮಂಡ್ಯ ಸೇರಿದಂತೆ ರಾಜ್ಯದ ಹೊಸ ವಿವಿಗಳನ್ನ ಮುಚ್ಚುವ ಬಗ್ಗೆ ಉನ್ನತ್ತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಪ್ರಸ್ತಾಪ ಮಾಡಿದ್ದರು. ಆದರೆ ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಅದಾದ ಬಳಿಕ ಕಳೆದ ಸರ್ಕಾರದ ಅವಧಿಯಲ್ಲಿ ಮಂಡ್ಯ ವಿವಿ ಘೋಷಣೆಯಾಗಿತ್ತು.
ಆದರೆ ಹಣಕಾಸು ವಿಚಾರದಿಂದ ಮಂಡ್ಯ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿತ್ತು. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸ್ವಪಕ್ಷದ ಶಾಸಕ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.



