Tuesday, May 19, 2026
Google search engine

Homeದೇಶಇಬೋಲಾ ಸೋಂಕು : ಭಾರತದಲ್ಲಿ ಹೈ ಅಲರ್ಟ್ ; ನಿಗಾ ಹೆಚ್ಚಿಸಿದ ಆರೋಗ್ಯ ಸಚಿವಾಲಯ

ಇಬೋಲಾ ಸೋಂಕು : ಭಾರತದಲ್ಲಿ ಹೈ ಅಲರ್ಟ್ ; ನಿಗಾ ಹೆಚ್ಚಿಸಿದ ಆರೋಗ್ಯ ಸಚಿವಾಲಯ

ನವದೆಹಲಿ : ಮಧ್ಯ ಆಫ್ರಿಕಾದಲ್ಲಿ ಹರಡುತ್ತಿರುವ ಇಬೋಲಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತೀವ್ರ ಜಾಗರೂಕತೆ ವಹಿಸಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾದ ಕೆಲವು ಭಾಗಗಳಲ್ಲಿ ‘ಬಂಡಿಬುಗ್ಯೋ ವೈರಸ್ ಸ್ಟ್ರೈನ್’ನಿಂದ ಹರಡುತ್ತಿರುವ ಇಬೋಲಾ ಪ್ರಕೋಪವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ‘ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (PHEIC) ಎಂದು ಘೋಷಿಸಿದೆ. ಇದರ ಬೆನ್ನಲ್ಲೇ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದೆ.

ಆರೋಗ್ಯ ಸಂಸ್ಥೆಗಳೊಂದಿಗೆ ಮಹತ್ವದ ಸಭೆ

ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಇತರ ಸಂಬಂಧಿತ ಇಲಾಖೆಗಳು ಪ್ರಸ್ತುತ ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಪರಾಮರ್ಶನಾ ಸಭೆ ನಡೆಸಿದವು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಭಾರತದಲ್ಲಿ ಸದ್ಯಕ್ಕೆ ಇಬೋಲಾ ಭೀತಿ ಇಲ್ಲ

ಭಾರತದಲ್ಲಿ ಪ್ರಸ್ತುತ ಯಾವುದೇ ಇಬೋಲಾ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ ಮತ್ತು ದೇಶಕ್ಕೆ ಸದ್ಯಕ್ಕೆ ಇರುವ ಅಪಾಯ ಅತ್ಯಂತ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ಮುನ್ನೆಚ್ಚರಿಕೆಯಾಗಿ ದೇಶದ ಪ್ರವೇಶ ದ್ವಾರಗಳಲ್ಲಿ (ವಿಮಾನ ನಿಲ್ದಾಣ/ಬಂದರು) ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕಣ್ಗಾವಲು ಹಾಗೂ ಸಿದ್ಧತೆಗಳನ್ನು ಬಲಪಡಿಸಲಾಗುತ್ತಿದೆ.
ಸ್ಕ್ರೀನಿಂಗ್ ಮತ್ತು ಕ್ವಾರಂಟೈನ್ ವ್ಯವಸ್ಥೆ ಬಲವರ್ಧನೆ

ತಪಾಸಣೆ (ಸ್ಕ್ರೀನಿಂಗ್), ನಿಗಾ, ಕ್ವಾರಂಟೈನ್ ಮತ್ತು ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನಗಳನ್ನು (SOPs) ಸರ್ಕಾರವು ಮರುಪರಿಶೀಲಿಸುತ್ತಿದೆ. ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಯನ್ನು (NIV) ಇಬೋಲಾ ತಪಾಸಣೆಯ ಮುಖ್ಯ ಕೇಂದ್ರವಾಗಿ ಗುರುತಿಸಲಾಗಿದ್ದು, ಹಂತಹಂತವಾಗಿ ಇತರ ಪ್ರಯೋಗಾಲಯಗಳನ್ನೂ ಈ ಪ್ರಕ್ರಿಯೆಗೆ ಸೇರಿಸಿಕೊಳ್ಳಲಾಗುತ್ತಿದೆ.

ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಹದ್ದಿನ ಕಣ್ಣು

ಪೀಡಿತ ಪ್ರದೇಶಗಳಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಸಮನ್ವಯತೆಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಐಸೊಲೇಷನ್ (ಪ್ರತ್ಯೇಕ ವಾರ್ಡ್) ಮತ್ತು ಕ್ವಾರಂಟೈನ್ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ವದಂತಿಗಳಿಗೆ ಕಿವಿಗೊಡದಂತೆ ಮನವಿ

ಸಾರ್ವಜನಿಕರು ಮತ್ತು ಮಾಧ್ಯಮಗಳು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಹಾಗೂ ಯಾವುದೇ ಅಪೃಮಾಣಿತ (ದೃಢಪಡಿಸದ) ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಆರೋಗ್ಯ ಸಚಿವಾಲಯ ಮನವಿ ಮಾಡಿದೆ. ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಜಾಗರೂಕವಾಗಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಸಚಿವಾಲಯ ಭರವಸೆ ನೀಡಿದೆ. ಜನರು ಕೇವಲ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಸಲಹೆ ನೀಡಲಾಗಿದೆ.

ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ

ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಕಾಯ್ದುಕೊಳ್ಳಲಾಗುತ್ತಿದ್ದು, ದೇಶದ ಸಾರ್ವಜನಿಕ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

RELATED ARTICLES
- Advertisment -
Google search engine

Most Popular