ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಸಚಿವ ಸಂಪುಟಕ್ಕೆ 23 ಶಾಸಕರನ್ನು ಸೇರಿಸಿಕೊಂಡಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷದ 21 ಶಾಸಕರು ಮತ್ತು ಮಿತ್ರಪಕ್ಷ ಕಾಂಗ್ರೆಸ್ನ 2 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ ಮತ್ತು ವಿಸಿಕೆ ಈ ಸಂಪುಟ ವಿಸ್ತರಣೆಯಲ್ಲಿ ಭಾಗವಹಿಸಿಲ್ಲ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಈ ಎರಡೂ ಪಕ್ಷಗಳು ಸರ್ಕಾರದ ಸಂಖ್ಯಾಬಲದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಶ್ರೀನಾಥ್, ಕಮಲಿ.ಎಸ್, ಸಿ.ವಿಜಯಲಕ್ಷ್ಮಿ, ಆರ್.ವಿ.ರಂಜಿತ್ಕುಮಾರ್, ವಿನೋತ್, ರಾಜೀವ್, ಬಿ.ರಾಜಕುಮಾರ್, ವಿ.ಗಾಂಧಿರಾಜ್, ಮಥನ್ ರಾಜಾ.ಪಿ, ಜೆಗದೇಶ್ವರಿ.ಕೆ, ರಾಜೇಶ್ ಕುಮಾರ್ ಎಸ್, ಎಂ.ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ಥಿಬನ್.ಎ, ರಮೇಶ್ ಕುಮಾರ್, ಪಿ.ವಿಶ್ವನಾಥಂ, ಪಿ.ವಿಶ್ವನಾಥನ್, ಆರ್.ವಿ. ಫರ್ವಾಸ್ ಜೆ, ಡಿ.ಶರತ್ಕುಮಾರ್, ಎನ್.ಮೇರಿ ವಿಲ್ಸನ್ ಹಾಗೂ ವಿಘ್ನೇಶ್.ಕೆ ಸೇರಿದ್ದಾರೆ. ಕಾಂಗ್ರೆಸ್ನ ರಾಜೇಶ್ ಕುಮಾರ್ ಮತ್ತು ತಿರು ಪಿ.ವಿಶ್ವನಾಥನ್ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ, ಡಿಎಂಕೆ ನಾಯಕ ಅನಿತಾ ರಾಧಾಕೃಷ್ಣನ್ ಹೊಸ ಟಿವಿಕೆ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರ ಇನ್ನೂ ನಾಲ್ಕರಿಂದ ಆರು ತಿಂಗಳಿಗಿಂತ ಹೆಚ್ಚು ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ ಎಂದೂ ಹೇಳಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಲ್ಲಿವಕ್ಕಂ ಕ್ಷೇತ್ರದ ಶಾಸಕ ಆಧವ್ ಅರ್ಜುನ್ ಅವರಿಗೆ ಧೈರ್ಯವಿದ್ದರೆ ತಕ್ಷಣ ರಾಜೀನಾಮೆ ನೀಡಿ. ನಾನು ಕೂಡ ರಾಜೀನಾಮೆ ನೀಡುತ್ತೇನೆ. ಬಳಿಕ ತಿರುಚೆಂಡೂರಿನಲ್ಲಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದಾರೆ.



