ಉತ್ತರಾಖಂಡ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದರನಾಥ ಯಾತ್ರಾ ಮಾರ್ಗದ ಮುಂಕಟಿಯಾ ಎಂಬಲ್ಲಿ ದಿಡೀರ್ ಭೂಕುಸಿತ ಸಂಭವಿಸಿದೆ. ಇದರಿಂದ ಅಲ್ಲಿ ಸಿಲುಕಿಕೊಂಡಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ. ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೋನಪ್ರಯಾಗ ಮತ್ತು ಗೌರಿಕುಂಡ್ ನಡುವೆ ಮಂಗಳವಾರ ತಡರಾತ್ರಿ ಈ ಭೂಕುಸಿತ ಸಂಭವಿಸಿತ್ತು.
ಭಾರಿ ಮಳೆಯ ಬೆನ್ನಲ್ಲೇ ಬೆಟ್ಟದ ಮೇಲಿಂದ ಉರುಳಿಬಿದ್ದ ಬೃಹತ್ ಮಣ್ಣು ಮತ್ತು ಕಲ್ಲುಗಳ ಅವಶೇಷಗಳು ಮುಖ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದವು. ಇದರಿಂದಾಗಿ ಕೇದರನಾಥದತ್ತ ಸಾಗುತ್ತಿದ್ದ ಭಾರಿ ಸಂಖ್ಯೆಯ ಯಾತ್ರಿಕರು ಮಧ್ಯದಲ್ಲೇ ಸಿಲುಕಿಕೊಳ್ಳುವಂತಾಯಿತು.
ನಿಯಂತ್ರಣ ಕೊಠಡಿಗೆ ಮಾಹಿತಿ ಸಿಗುತ್ತಿದ್ದಂತೆಯೇ ವಿಪತ್ತು ನಿರ್ವಹಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, ವಿವಿಧ ರಕ್ಷಣಾ ಸಂಸ್ಥೆಗಳ ಜಂಟಿ ತಂಡಗಳು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ.
ಸಂಕಷ್ಟದ ಸ್ಥಿತಿಯಲ್ಲಿದ್ದ ಎಲ್ಲಾ 10,450 ಭಕ್ತರನ್ನು ಯಾವುದೇ ಪ್ರಾಣಹಾನಿಯಾಗದಂತೆ ರಕ್ಷಣಾ ಸಿಬ್ಬಂದಿ ಅತ್ಯಂತ ಸುರಕ್ಷಿತವಾಗಿ ಅಲ್ಲಿಂದ ತೆರವುಗೊಳಿಸಿ ಸುರಕ್ಷಿತ ತಂಗುದಾಣಗಳಿಗೆ ತಲುಪಿಸಿದ್ದಾರೆ.
ಇಂತಹ ಅಪಾಯಕಾರಿ ವಾತಾವರಣದಲ್ಲೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಜಂಟಿಯಾಗಿ ಸಾಹಸಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿವೆ.
ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ತಕ್ಷಣವೇ ಅಧಿಕಾರಿಗಳು ಸ್ಥಳದಲ್ಲಿ ಜೆಸಿಬಿ (JCB) ಯಂತ್ರಗಳನ್ನು ನಿಯೋಜಿಸಿದರು. ರಸ್ತೆಯ ಮೇಲೆ ಶೇಖರಣೆಯಾಗಿದ್ದ ಬೃಹತ್ ಮಣ್ಣು ಮತ್ತು ಕಲ್ಲುಗಳ ಅವಶೇಷಗಳನ್ನು ತೆರವುಗೊಳಿಸಿ ಮಾರ್ಗವನ್ನು ಮುಕ್ತಗೊಳಿಸಲಾಯಿತು.



