ಮೈಸೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವಾ ಮನೋಭಾವ ನಮಗೆಲ್ಲರಿಗೂ ಆದರ್ಶ. ಸಮಾಜದಲ್ಲಿ ಯಾವುದೇ ಧರ್ಮ ಅಥವಾ ನಂಬಿಕೆ ಇದ್ದರೂ ಎಲ್ಲರಲ್ಲೂ ಪರಸ್ಪರ ಹೊಂದಾಣಿಕೆ ಮತ್ತು ಸೇವಾಮನೋಭಾವನೆ ಇರುವುದು ಅತ್ಯಂತ ಮುಖ್ಯ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಉದ್ಘಾಟಿಸಿ ಸಂಸದ ಯದುವೀರ್ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ವ್ಯಕ್ತಪಡಿಸಿದರು.
ಇಂದು ಕರ್ನಾಟಕವು ಒಂದು ಪ್ರಗತಿಪರ ರಾಜ್ಯವಾಗಿ ಗುರುತಿಸಿಕೊಂಡಿರುವುದಕ್ಕೆ ಅನೇಕ ನಾಯಕರ ಕೊಡುಗೆ ಇದೆ. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಧನೆಗಳು ಅತ್ಯಂತ ಪ್ರಮುಖವಾದವು. ಅವರ ಈ ಸಾಧನೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸುವರ್ಣ ಮೈಸೂರಿನಂತೆ ಒಂದು ಅಭಿವೃದ್ಧಿ ಹೊಂದಿದ ಕರ್ನಾಟಕವನ್ನು ನಿರ್ಮಿಸುವುದೇ ನಾಲ್ವಡಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಅವರ ಮೌಲ್ಯಗಳನ್ನು ಮತ್ತು ತತ್ವಗಳನ್ನು ಮುಂಬರುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಲೇಖಕರು ಸಿದ್ದಸ್ವಾಮಿ ಅವರು ಮಾತನಾಡಿ, ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಪಾಳೆಗಾರರು, ಕಮಿಷನರ್ ಗಳು ಮತ್ತು ದಿವಾನರು ಸೇರಿದಂತೆ ಸುಮಾರು 52 ಗಣ್ಯರು ಸೇವೆ ಸಲ್ಲಿಸಿದ್ದಾರೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇತಿಹಾಸದ ಧ್ರುವತಾರೆಯಂತೆ ಮಿಂಚಿದ್ದಾರೆ ಎಂದು ಹೇಳಿದರು.
ನಾಲ್ವಡಿ ಅವರಿಗೆ ಬನಾರಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತು . ಆದ್ದರಿಂದ ಅವರನ್ನು ರಾಜರ್ಷಿ ಡಾ. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸಂಬೋಧಿಸುವುದು ಹೆಚ್ಚು ಸೂಕ್ತ ಎಂದರು.
ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಆರಂಭವಾಗಿ ಪ್ರಜಾಪ್ರಭುತ್ವದ ಅಂಕುರಾರ್ಪಣೆಯಾಯಿತು. ಇದನ್ನು ಮುಂದುವರಿಸಿದ ನಾಲ್ವಡಿಯವರು 1907 ರಲ್ಲಿ ನ್ಯಾಯ ವಿಧಾಯಕ ಸಭೆಯನ್ನು ಅಸ್ತಿತ್ವಕ್ಕೆ ತಂದರು ಎಂದು ಹೇಳಿದರು.
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಗೆ ಅಡಿಪಾಯ ಹಾಕುವ ಮೊದಲೇ, ನಾಲ್ವಡಿಯವರು 1918 ರಲ್ಲಿ ಹಿಂದುಳಿದ ವರ್ಗದವರಿಗೆ ಸೌಲಭ್ಯ ಕಲ್ಪಿಸಲು ಮಿಲ್ಲರ್ ಸಮಿತಿಯನ್ನು ರಚಿಸಿದ್ದರು. ಆ ಮೂಲಕ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಆಡಳಿತದಲ್ಲಿ ನ್ಯಾಯ ಒದಗಿಸಿದರು ಎಂದು ತಿಳಿಸಿದರು.
ನಾಲ್ವಡಿಯವರ ಕೊಡುಗೆಗಳು ಅಪಾರವಾಗಿದ್ದು, ಅವರ ಜಯಂತಿಯು ಮೈಸೂರಿನ ಹಾಗೂ ಕರ್ನಾಟಕದ ಮನೆಮನೆಯ ಹಬ್ಬವಾಗಿ ಆಚರಿಸಲ್ಪಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ತು ಶಾಸಕರಾದ ಸಿ. ಎನ್. ಮಂಜೇಗೌಡ ಅವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಕೆ.ಆರ್.ಎಸ್ ಅಣೆಕಟ್ಟನ್ನು ಕಟ್ಟುವ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದಾಗ, ಅವರು ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಅಣೆಕಟ್ಟನ್ನು ಪೂರ್ಣಗೊಳಿಸಿದರು ಎಂದು ಅವರ ತ್ಯಾಗವನ್ನು ಜನರು ಸದಾ ನೆನಪಿಸಿಕೊಳ್ಳಬೇಕು ಎಂದರು.
ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಜನತೆ ಇಂದಿಗೂ ಕಾವೇರಿ ನೀರು ಕುಡಿಯಲು ,ಡಾ.ವಿಶ್ವೇಶ್ವರಯ್ಯನವರು ಹಾಗೂ ನಾಲ್ವಡಿ ಒಡೆಯರ್ ಅವರ ಶ್ರಮ ಮುಖ್ಯ ಕಾರಣ. ಈ ಇಬ್ಬರ ಮಹನೀಯರನ್ನು ಪೋಜಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇಂದಿನ ರಾಜಕಾರಣಿಗಳು ಸರ್ಕಾರದ ಹಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತಮ್ಮ ಹೆಸರನ್ನು ಹಾಕಿಸಿಕೊಳ್ಳುತ್ತಾರೆ ಹಾಗೂ ಅದನ್ನು ಚುನಾವಣೆಯ ಪ್ರಚಾರವಾಗಿ ಬಳಸಿಕೊಳ್ಳುತ್ತಾರೆ. ಆದರೆ ಒಡೆಯರ್ ಅವರು ಉಕ್ಕಿನ ಕಾರ್ಖಾನೆಯಂತಹ ಯೋಜನೆಗಳನ್ನು ರೂಪಿಸಿದರೂ ಅದಕ್ಕೆ ತಮ್ಮ ಹೆಸರನ್ನು ಇಟ್ಟುಕೊಳ್ಳದೆ ವಿಶ್ವೇಶ್ವರಯ್ಯನವರ ಹೆಸರಿಟ್ಟರು ಎಂದು ಹೇಳಿದರು.
ಇಡೀ ವಿಶ್ವದಲ್ಲೇ ಮೈಸೂರು ಮೆಡಿಕಲ್ ಕಾಲೇಜು ತನ್ನದೇ ಆದ ಇತಿಹಾಸ ಹೊಂದಿದೆ. ಇದನ್ನು ನಾಲ್ವಡಿ ಒಡೆಯರ್ ಅವರು ಕಟ್ಟಿದ್ದರು ಎಂಬುದು ಅಲ್ಲಿ ಓದಿದವರಿಗೆ ಮಾತ್ರ ತಿಳಿದಿದೆ. ಇಂತಹ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.
ಇತಿಹಾಸವನ್ನು ಬರೆಯಬೇಕೆಂದರೆ ಇತಿಹಾಸವನ್ನು ತಿಳಿದಿರಬೇಕು. ಮುಂದಿನ ಪೀಳಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರು ಬಿಟ್ಟುಹೋದ ಗುರುತಿನ ಹೆಜ್ಜೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ. ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ. ಎಸ್ ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ಗಣ್ಯರಾದ ಮಾಜಿ ಮೇಯರ್ ಪುರುಷೋತ್ತಮ್,ಸೋಮಯ್ಯ ಮಳಿಯೂರು, ಮತ್ತಿತರರು ಉಪಸ್ಥಿತರಿದ್ದರು.



