Monday, June 8, 2026
Google search engine

Homeರಾಜಕೀಯದೇವೇಗೌಡರ ಬಗ್ಗೆ ರಾಜಕೀಯ ಬೇಡ : ಕಾಂಗ್ರೆಸ್‌ನ ಕರಾಳ ಇತಿಹಾಸ ನೆನಪಿಸಿದ ಜೆಡಿಎಸ್‌

ದೇವೇಗೌಡರ ಬಗ್ಗೆ ರಾಜಕೀಯ ಬೇಡ : ಕಾಂಗ್ರೆಸ್‌ನ ಕರಾಳ ಇತಿಹಾಸ ನೆನಪಿಸಿದ ಜೆಡಿಎಸ್‌

ಬೆಂಗಳೂರು : ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿ ಕೊಂಡು, ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ನೀತಿಗೆಟ್ಟ ಕಾಂಗ್ರೆಸ್ಸಿಗರೇ, ಜೆಡಿಎಸ್‌‍ ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಜೆಡಿಎಸ್‌‍ ಪ್ರಶ್ನಿಸಿದೆ.

ಕಾಂಗ್ರೆಸ್‌‍ ನಾಯಕ ಸುರ್ಜೆವಾಲ ಅವರ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, ಮಾಜಿ ಪ್ರಧಾನಿ ಹೆಚ್‌. ಡಿ.ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ. ಇಮ್ಮಡಿ ಪುಲಿಕೇಶಿ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನದ ಪರಾಕಾಷ್ಠೆ ಎಂದು ವಾಗ್ದಾಳಿ ನಡೆಸಿದೆ.

ಕೇವಲ ವಸೂಲಿ ಮಾಡಿಕೊಂಡು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜೇವಾಲ ಉರುಫ್‌ ವಸೂಲಿವಾಲ ಎಂದು ಆರೋಪಿಸಿರುವ ಜೆಡಿಎಸ್‌‍, ದೇವೇಗೌಡರ ವಿಷಯ ಬಿಟ್ಟು ನಿಮ್ಮ ಪಕ್ಷ, ಸರ್ಕಾರದಲ್ಲಿ ನಡೆಯುತ್ತಿರುವ ಒಳಜಗಳ, ಒಳಸಂಚು ಹತ್ತಿಕ್ಕುವ ಕಡೆ ಗಮನ ಹರಿಸಿ ಎಂದಿದೆ.

ಭೂತದ ಬಾಯಲ್ಲಿ ಭಗವದ್ಗೀತೆ ಎಂದಿರುವ ಜೆಡಿಎಸ್‌‍, ಸುರ್ಜೇವಾಲ ಅವರಿಗೆ ಜೆಡಿಎಸ್‌‍ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್‌‍ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ.

1997ರಲ್ಲಿ ಕುತಂತ್ರದಿಂದ ಹೆಚ್‌.ಡಿ.ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು. ಕಾಂಗ್ರೆಸ್‌‍ ಪಕ್ಷ ಮಾಡಿದ ಈ ಮಹಾದ್ರೋಹವನ್ನು ಕಳೆದ 30 ವರ್ಷದಿಂದ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ? 2019ರಲ್ಲಿ ಮೈತ್ರಿ ನಾಟಕವಾಡಿ, ಹೆಚ್‌.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಸರ್ಕಾರ ಕೆಡವಿದ್ದೂ ನಿಮ್ಮದೇ ಕಾಂಗ್ರೆಸ್‌‍. ಕಾಂಗ್ರೆಸ್‌‍ನದ್ದು ಒಳಗೆ ಜಾತ್ಯತೀತತೆಯ ಮುಖವಾಡ, ಹೊರಗೆ ಜಾತಿ ದ್ವೇಷದ ರಾಜಕಾರಣ ಎಂದು ಜೆಡಿಎಸ್‌‍ ಟೀಕಿಸಿದೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಹಾಗೂ ಡಾ. ಮನಮೋಹನ್‌ ಸಿಂಗ್‌ ಅವರಂತಹ ನಾಯಕರನ್ನು ನಿಮ್ಮ ನಕಲಿ ಗಾಂಧಿ ಕುಟುಂಬ ಹೇಗೆ ಅಪಮಾನಿಸಿ, ಹೇಗೆಲ್ಲಾ ನಡೆಸಿಕೊಂಡಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್‌ ವಸೂಲಿವಾಲ ಎಂದು ವ್ಯಂಗ್ಯವಾಡಿದೆ.

RELATED ARTICLES
- Advertisment -
Google search engine

Most Popular