ನವದೆಹಲಿ : ಇನ್ನುಮುಂದೆ ಮೆಡಿಕಲ್ ಶಾಪ್ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಮತ್ತು ಕೆಮ್ಮಿನ ಸಿರಪ್ಗಳ ಅತಿಯಾದ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಇನ್ನುಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ಶೀತ ಹಾಗೂ ಜ್ವರಕ್ಕೆ ಸಿರಪ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರವು 1945ರ ಹಳೆಯ ಔಷಧ ನಿಯಮಗಳ ವೇಳಾಪಟ್ಟಿ ಕೆ ಸಿರಪ್ ಪದವನ್ನು ಅಧಿಕೃತವಾಗಿ ತೆಗೆದುಹಾಕಿದೆ. ಈ ಹಿಂದೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿಗಳಲ್ಲಿ ಕೆಮ್ಮಿನ ಸಿರಪ್ಗಳನ್ನು ಮಾರಾಟ ಮಾಡಲು ಕೆಲವು ಪರವಾನಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಸಣ್ಣ ಹಳ್ಳಿಗಳಲ್ಲೂ ಪರವಾನಗಿ ಇಲ್ಲದೆ ಸಿರಪ್ ಮಾರಾಟ ಮಾಡುವಂತಿಲ್ಲ.
ಹೊಸ ಬದಲಾವಣೆಯ ನಂತರ, ಎಲ್ಲಾ ರೀತಿಯ ಕೆಮ್ಮಿನ ಸಿರಪ್ಗಳನ್ನು 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಗ್ರಾಹಕರು ವೈದ್ಯರ ಚೀಟಿಯನ್ನು ತೋರಿಸುವುದು ಈಗ ಕಡ್ಡಾಯವಾಗಿದೆ.
ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಮತ್ತು ದೇಶಾದ್ಯಂತ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.



