ಮಡಿಕೇರಿ : ರಾಜ್ಯದಲ್ಲಿ ಶೇಕಡ 60ರಷ್ಟು ಮಳೆ ಕೊರತೆ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ.
ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ.
ಕಾವೇರಿ ಕೊಳ್ಳದಲ್ಲಿನ ಮಳೆಯ ತೀವ್ರ ಅಭಾವವೇ ಈ ಪರಿಸ್ಥಿತಿಗೆ ಕಾರಣವಾಗಿದ್ದು ಇದರಿಂದ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ. ಕೃಷಿ ಚಟುವಟಿಕೆಗಳಿಗೂ ನೀರು ಸಿಗದೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.



