ಮೈಸೂರು : ಜಿಲ್ಲಾಧಿಕಾರಿಗಳ ಸೂಚನೆಯಂತೆ ಮೈಸೂರು ನಗರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಆಹಾರ ವ್ಯಾಪಾರ ಸಂಸ್ಥೆಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘನೆ ಪತ್ತೆಯಾದ ಹಲವು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿ ತಂಡವು ಜೂನ್ 22ರ ಸಂಜೆ 4 ಗಂಟೆಯಿಂದ ಜೂನ್ 23ರ ಸಂಜೆ 4 ಗಂಟೆಯವರೆಗೆ ದಟ್ಟಗಳ್ಳಿ, ಕುವೆಂಪುನಗರ, ಸರಸ್ವತಿಪುರಂ, ಉರ್ಸ್ ರಸ್ತೆ ಹಾಗೂ ಕೊತ್ವಾಲ್ ರಾಮಯ್ಯ ಬೀದಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿತು.
ಕಾರ್ಯಾಚರಣೆ ವೇಳೆ ಒಟ್ಟು 23 ಆಹಾರ ವ್ಯಾಪಾರ ಸಂಸ್ಥೆಗಳನ್ನು ಪರಿಶೀಲಿಸಲಾಗಿದ್ದು, 5 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. 3 ಕಡೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ವಿಶ್ಲೇಷಣೆಗಾಗಿ 6 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 4 ಸರ್ವೇ ಮಾದರಿಗಳು ಹಾಗೂ 2 ಕಾನೂನು ಕ್ರಮಕ್ಕಾಗಿ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ.
ಮೈಸೂರು ನಗರ ವ್ಯಾಪ್ತಿಯಲ್ಲಿ 15 ಸ್ಥಳಗಳಿಗೆ ಭೇಟಿ ನೀಡಿದ ಅಧಿಕಾರಿಗಳು 9 ಬೀದಿ ಬದಿ ಆಹಾರ ಮಾರಾಟಗಾರರನ್ನು ಪರಿಶೀಲಿಸಿದ್ದು, ಅವರಲ್ಲಿ 4 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. 4 ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೂ ತಪಾಸಣೆ ನಡೆಸಿ ಒಟ್ಟು 5 ನೋಟಿಸ್ಗಳನ್ನು ನೀಡಲಾಗಿದೆ.
ಇದೇ ವೇಳೆ ಆಹಾರದಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಸ್ಥಳಗಳಿಂದ ಹೆಚ್ಚು ಬಣ್ಣ ಮಿಶ್ರಣ ಮಾಡಿದ್ದ ಖಾರ ಮಿಕ್ಸ್ಚರ್, ಹಸಿರು ಬಟಾಣಿ, ಕೆಂಪು ಬಟಾಣಿ ಸೇರಿದಂತೆ ಒಟ್ಟು 43.5 ಕೆ.ಜಿ. ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಹಾರ ಪದಾರ್ಥಗಳ ಮೌಲ್ಯ ₹4,160 ಎಂದು ಅಂದಾಜಿಸಲಾಗಿದೆ.
ಆಹಾರದ ಗುಣಮಟ್ಟ ಪರಿಶೀಲನೆಗಾಗಿ 8 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 4 ಸೂಕ್ಷ್ಮಜೀವಿ (Microbiological), 3 ರಾಸಾಯನಿಕ (Chemical) ಹಾಗೂ 1 ಲೇಬಲ್ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಒಂದು ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸಲು ಮಾದರಿ ಸಂಗ್ರಹಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಕಾಂತರಾಜು ಎ.ಎನ್. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವ ಆಹಾರ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.



