ಮೈಸೂರು: ನೇರ ಸಾಲ ಹಾಗೂ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದ್ದಾರೆ.
ಅವರು ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ಕಂದಾಯ ವಿಭಾಗದ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ, ನೇರ ಸಾಲ ಯೋಜನೆಯ ಸಾಲದ ಮೊತ್ತ ಐವತ್ತು ಸಾವಿರದಿಂದ ಎರಡು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಬಗ್ಗೆ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕು ಎಂದು ಅವರು ಸೂಚಿಸಿದರು.
ಹಾಗೆಯೇ ಗಂಗಾ ಕಲ್ಯಾಣ ಯೋಜನೆಯ ಘಟಕ ವೆಚ್ಚವನ್ನು ಎರಡು ಲಕ್ಷ ರೂಪಾಯಿಯಿಂದ ೩.೭೫ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಹಾಯ ಧನದ ಮೊತ್ತ ೩.೨೫ ಲಕ್ಷ, ಸಾಲ ೫೦,೦೦೦ ದೊರೆಯಲಿದೆ ಎಂದು ತಿಳಿಸಿದರು.
ಇದರ ಬಗ್ಗೆಯೂ ಸಹ ಸಾರ್ವಜನಿಕರಿಗೆ ವ್ಯಾಪಕವಾಗಿ ತಿಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಮುಂದಿನ ೪೫ ದಿವಸಗಳ ಒಳಗೆ ಎಲ್ಲಾ ಯೋಜನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಧಿಕಾರಿಗಳು ಸಂಬಂಧ ಪಟ್ಟ ಶಾಸಕರನ್ನು ಸಂಪರ್ಕ ಮಾಡಿ ಪಡೆಯಲೇಬೇಕು ಡಿಸೆಂಬರ್ ಅಂತ್ಯದ ಒಳಗೆ ನಿಗದಿತ ಗುರಿ ಸಾಧಿಸಬೇಕು ಮತ್ತು ಶೇ. ನೂರರಷ್ಟು ಅನುದಾನದ ಬಳಕೆ ಆಗಬೇಕು ಎಂದು ಸಚಿವ ಶಿವರಾಜ ತಂಗಡಗಿ ಸೂಚಿಸಿದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ತುಳಸಿ ಮದ್ದಿನೇನಿ ಹಾಗು ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು.
ನಾಲ್ವರನ್ನು ಕರೆದುಕೊಂಡು ಹೋಗಲಿ: ನಲವತ್ತಲ್ಲ ಕೇವಲ ನಾಲ್ಕು ಶಾಸಕರನ್ನು ಕರೆದುಕೊಂಡು ಹೋಗಲಿ ಎಂದು ಬಿ.ಎಲ್.ಸಂತೋಷ್ಗೆ ಸಚಿವ ಶಿವರಾಜ್ ತಂಗಡಿ ಸವಾಲು ಹಾಕಿದರು. ೪೦ ಜನ ಕೈ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮುಳುಗುವ ಹಡಗು. ಅಲ್ಲಿಗೆ ಯಾರು ಹತ್ತುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುವುದು ದೊಡ್ಡ ಸುಳ್ಳು. ಬಿಜೆಪಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಚುನಾವಣೆ ವೇಳೆ ಗಲ್ಲಿ ಗಲ್ಲಿ ಸುತ್ತಿದರು ಬಂದಿದ್ದು ಕೇವಲ ೬೬ ಸ್ಥಾನ. ಚುನಾವಣಾ ಚಾಣಕ್ಯನ ಆಟ ಏನು ನಡೆಯಲಿಲ್ಲ. ಈಗ ನಮ್ಮ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ನಮ್ಮಿಂದ ಯಾರು ಹೊರಗೆ ಹೋಗುವುದಿಲ್ಲ ಎಂದು ಶಿವರಾಜ್ ತಂಗಡಗಿ ಹೇಳಿದರು.