ಬೆಂಗಳೂರು: ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ ೧ ನೌಕೆಯನ್ನು ಎತ್ತರದ ಕಕ್ಷೆಗೆ ಏರಿಸುವ ೪ನೇ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಈ ಕಾರ್ಯಾಚರಣೆ ನಡೆಸಿತು. ಈಗ ಆದಿತ್ಯ ನೌಕೆಯು ಭೂಮಿಯಿಂದ ೨೫೬ ಕಿ.ಮೀ x ೧೨೧೯೭೩ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್ಡಿಎಸ್ಸಿ-ಎಸ್ಹೆಚ್ಎಆರ್ ಮತ್ತು ಪೋರ್ಟ್ ಬ್ಲೇರ್ನಲ್ಲಿರುವ ಇಸ್ರೊ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗಿದೆ.
ಮುಂದಿನ (೫ನೇ) ಹಂತದ ಕಕ್ಷೆ ಬದಲಾವಣೆ ಕಾರ್ಯ ಸೆ. ೧೯ರಂದು ನಿಗದಿಯಾಗಿದೆ. ಇದಕ್ಕೂ ಮೊದಲು ಸೆ.೫ರಂದು ಆದಿತ್ಯ-ಎಲ್ ೧, ೨ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಅದು ಭೂಮಿಯಿಂದ ೨೮೨ ಕಿ.ಮೀ x ೪೦೨೨೫ ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತ್ತು.
ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-೩ ನೌಕೆ ಯಶಸ್ವಿಯಾಗಿ ಇಳಿದ ನಂತರ, ಇಸ್ರೋ ಸೆ.೨ ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ದೇಶದ ಮೊದಲ ಸೌರ ಮಿಷನ್ ಆದಿತ್ಯ- ಎಲ್ ೧ ಅನ್ನು ಉಡ್ಡಯನ ಮಾಡಿತ್ತು. ಇದು ೭ ವಿಭಿನ್ನ ಪೇಲೋಡ್ಗಳನ್ನು ನಭಕ್ಕೆ ಹೊತ್ತೊಯ್ದಿದೆ. ಭೂಮಿಯಿಂದ ೧೫ ಲಕ್ಷ ಕಿ.ಮೀ. ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ ೧ ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. ೧೨೫ ದಿನಗಳಲ್ಲಿ ಎಲ್-೧ ಬಿಂದುವಿಗೆ ಸೇರಿಸಲಾಗುತ್ತದೆ.
ಆದಿತ್ಯ-ಎಲ್ ೧ ಸೂರ್ಯನ ಮೇಲೆ ಇಳಿಯುವುದಿಲ್ಲ. ಇದು ಭೂಮಿಯಿಂದ ಸರಿಸುಮಾರು ೧.೫ ಮಿಲಿಯನ್ ಕಿ.ಮೀ ದೂರದಲ್ಲಿ ನೆಲೆಗೊಳ್ಳುತ್ತದೆ. ಇದು ಭೂಮಿ ಮತ್ತು ಸೂರ್ಯನ ದೂರದ ಕೇವಲ ಶೇ.೧ ರಷ್ಟಿದೆ. ಸೂರ್ಯ ಅನಿಲದ ದೈತ್ಯ ಗೋಳ. ಆದಿತ್ಯ-ಎಲ್ ೧ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ ಎಂದು ಇಸ್ರೋ ಹೇಳಿದೆ.