ಮಂಗಳೂರು(ದಕ್ಷಿಣ ಕನ್ನಡ): ನಿಗದಿತ ಟಿಕೆಟ್ ದರ 400 ಆಗಿದ್ರೆ ಹಬ್ಬ ಹರಿದಿನಗಳಲ್ಲಿ ಅದಕ್ಕಿಂತ ಎರಡು ಪಟ್ಟು ವಸೂಲಿ ಮಾಡುವುದು ಮತ್ತು ಇದರಲ್ಲಿ ಮಧ್ಯವರ್ತಿಗಳು ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಪ್ರಕರಣಗಳು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ತಿಳಿಸಿದ್ದಾರೆ.
ಅವರು ಮಂಗಳೂರು ಆರ್ ಟಿಒ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಹಬ್ಬದ ರಜಾದಿನಗಳಲ್ಲಿ ದೂರದ ಊರುಗಳಿಗೆ ಸಂಚರಿಸುವ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕ ರಿಂದ ನಿಗದಿತ ಟಿಕೆಟ್ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಶಿವಮೊಗ್ಗ ಸಾರಿಗೆ ವಿಭಾಗದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸೆ.15ರಿಂದ 18ರ ತನಕ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಶಿವಮೊಗ್ಗ ವಿಭಾಗದ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಈ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳೂರಿನಲ್ಲಿ 4, ಶಿವಮೊಗ್ಗದಲ್ಲಿ 2, ಪುತ್ತೂರಿನಲ್ಲಿ 2 , ಸಾಗರ 1 , ಉಡುಪಿ 4 , ದಾವಣಗೆರೆ 4, ಚಿತ್ರದುರ್ಗದಲ್ಲಿ 4 ಸಾರಿಗೆ ಇಲಾಖೆಯ ವಿಶೇಷ ತಪಾಸಣಾ ತಂಡವನ್ನು ರಚಿಸಲಾಗಿದೆ. ಪ್ರತಿಯೊಂದು ತಂಡದಲ್ಲೂ ಒಬ್ಬ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಇರ್ತಾರೆ. ಪ್ರಯಾಣಿಕರ ದೂರು, ಮಾಹಿತಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಿಂದ ಹೊರಹೋಗುವ ಖಾಸಗಿ ಬಸ್ ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತದೆ. ಸರಕಾರಿ ಸಾರಿಗೆ ಸಂಸ್ಥೆಗೆ ಸೇರಿರುವ ಬಸ್ಗ ಳಲ್ಲಿ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಕಡಿಮೆ. ಒಂದು ವೇಳೆ ಸರಕಾರಿ ಬಸ್ ಗಳಲ್ಲಿ ಜಾಸ್ತಿ ವಸೂಲಿ ಮಾಡಿದರೂ ಸಾರಿಗೆ ಇಲಾಖೆಗೆ ಮತ್ತು ಕೆಎಸ್ ಆರ್ ಟಿಸಿ ದೂರು ನೀಡಬಹುದು ಎಂದರು.