ಮೈಸೂರು: ನಾಡಹಬ್ಬ ದಸರಾದ ರೈತ ದಸರಾದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ನಗರದ ಜೆ.ಕೆ ಮೈದಾನದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳ ೧೦ ಸ್ಪರ್ಧಿಗಳು ಭಾಗವಹಿಸಿ, ಬೆಳಗ್ಗೆ ದನದ ಹಾಲನ್ನು ಕರೆದರು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಕರೆದ ಹಾಲಿನ ತೂಕವನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ.ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ವಿವಿಧ ಕಡೆ ವಿವಿಧ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯುತ್ತಿದೆ.
ನಗರದ ಜೆ.ಕೆ ಮೈದಾನದ ರೈತ ದಸರಾದಲ್ಲಿ ಇಂದು ಬೆಳಗ್ಗೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳಿಂದ ೧೦ ಸ್ಪರ್ಧಿಗಳು ಭಾಗವಹಿಸಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ಜಿಲ್ಲೆಯಿಂದ ೧೦ ಜನ ರೈತರು ಇದ್ದರು. ಅದರಲ್ಲಿ ಬೆಳಗ್ಗೆ ಮೊದಲ ಹಂತದಲ್ಲಿ ಹಾಲು ಕರೆದ ಸ್ಪರ್ಧಿಗಳ ವಿವರ ಹೀಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಕುಮಾರ್ ೧೧.೯೭೦ ಕೆ.ಜಿ., ಮಂಡ್ಯದ ಗೋಪಾಲಕೃಷ್ಣ ೧೮.೭೫೦ ಕೆ.ಜಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮನ್ವಿತ್ ಗೌಡ ೨೨.೫೮೦ ಕೆ.ಜಿ, ನಂಜನಗೂಡಿನ ತಾಂಡವಪುರ ಗ್ರಾಮದ ಬಸವಯ್ಯ ೧೬.೫೪೦ ಕೆ.ಜಿ, ಮಂಡ್ಯ ಜಿಲ್ಲೆಯ ಶ್ರೀ ರಂಗಪಟ್ಟಣದ ಚಂದಗಾಲದ ವರದರಾಜು ೧೦.೯೦೦ ಕೆ.ಜಿ, ಬೆಂಗಳೂರು ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ ೨೫.೮೫೦ ಕೆ.ಜಿ, ಚಾಮರಾಜನಗರದ ಶಿವಮಲ್ಲಪ್ಪ ೯.೮೯೦ ಕೆ.ಜಿ, ಆನೆಕಲ್ ನ ಶ್ರೀನಿವಾಸ್ ೧೮.೯೩೦ ಕೆ.ಜಿ, ಮೈಸೂರಿನ ಸಾರವ್ ರವೀಂದ್ರ ೧೭.೮೩೦ ಕೆ.ಜಿ, ಬೆಂಗಳೂರಿನ ಯಧುನಂದನ್ ೧೬.೯೮೦ ಕೆ.ಜಿ ಹಾಲನ್ನು ಬೆಳಗ್ಗೆ ಕರೆದಿದ್ದಾರೆ.
ಸಂಜೆ ಮತ್ತೊಂದು ಸುತ್ತು ಹಾಲು ಕರೆದು, ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ಯಾರು ಹೆಚ್ಚು ಹಾಲು ಕರೆದಿದ್ದಾರೆ ಎಂದು ನೋಡಿ, ಅವರಿಗೆ ಮೊದಲ ಬಹುಮಾನ ೫೦ ಸಾವಿರ ರೂ., ಎರಡನೇ ೪೦ ಸಾವಿರ ರೂ., ಮೂರನೇ ಬಹುಮಾನ ೩೦ ಸಾವಿರ ರೂ. ಹಾಗೂ ಸಮಾಧಾನಕರವಾಗಿ ೧೦ ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.