ಮೈಸೂರು : ಕನ್ನಡವೆಂದರೆ ಕನಕ, ಕನಕನೆಂದರೆ ಕನ್ನಡವೆನ್ನುಷ್ಟರ ಮಟ್ಟಿಗೆ ಕನ್ನಡಕ್ಕೂ ಕನಕನಿಗೂ ಅವಿನಾಭಾವ ಸಂಬಂಧವಿದ್ದು, ಸಾಮಾನ್ಯವಾಗಿ ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ಕನ್ನಡ ನಾಡು ಕಂಡ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನೂ ನಾಡು ಆಚರಿಸುವುದರಿಂದ ಕನ್ನಡ ರಾಜ್ಯೋತ್ಸವವೆಂಬುದು ಕನಕೋತ್ಸವವೂ ಹೌದೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ನಗರದ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನಕದಾಸ ನಗರದ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಏರ್ಪಡಿಸಿದ್ದ ೬೮ ನೇ ಕನ್ನಡ ರಾಜ್ಯೋತ್ಸವ ಮತ್ತು ೫೩೬ ನೇ ಕನಕದಾಸ ಜಯಂತಿ ಹಾಗೂ ಕನ್ನಡ ಚಲನ ಚಿತ್ರ ಗೀತೆಗಳ ಕರೋಕೆ ಗೀತಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಸಾರ, ನೃಸಿಂಹ ಸ್ತವ ದಂತಹ ಶ್ರೇಷ್ಠ ಪಂಚ ಮಹಾಕಾವ್ಯಗಳು ಸೇರಿದಂತೆ ಸಾವಿರಾರು ಕೀರ್ತನೆಗಳನ್ನು, ಸುಳಾದಿಗಳನ್ನು, ಮುಂಡಿಗೆಗಳನ್ನು ಮಾನವೀಯ ನೆಲೆಯಲ್ಲಿ ನಾಡಿಗೆ ನೀಡಿ ಕನ್ನಡವನ್ನು ಶ್ರೀಮಂತ ಗೊಳಿಸಿದವರು ಕನಕದಾಸರೆಂದರು.
ಕನಕದಾಸರಂತಹ ಸಹಸ್ರಾರು ಶ್ರೇಷ್ಠ ಮಹನೀಯರನ್ನು ಒಳಗೊಂಡಿರುವ ಕನ್ನಡ ಭಾಷೆಗೆ ಅದರದೇ ಆದ ಒಂದು ಕನಕ ಚರಿತ್ರೆ ಇದೆ. ಈ ಸುವರ್ಣ ಚರಿತ್ರೆ ಇಂದು, ನಿನ್ನೆ, ಮೊನ್ನೆಯದಲ್ಲ. ಇದಕ್ಕೆ ಐದು ಸಾವಿರಕ್ಕೂ ಮಿಗಿಲಾದ ಇತಿಹಾಸವುಂಟು. ಮಾತನಾಡುವ ಜಗತ್ತಿನೊಡನೆ ನಮ್ಮ ಕನ್ನಡ ಭಾಷೆಯೂ ಹುಟ್ಟಿತೆಂಬ ಮಾತೂ ಇದೆ. ಇಂಥ ಕನ್ನಡ ಭಾಷಿಗರು ನಾವೆಂಬುದಕ್ಕೆ ಪ್ರತಿಯೊಬ್ಬ ಕನ್ನಡಿಗರೂ ಹೆಮ್ಮೆ ಪಡಬೇಕು. ಕನ್ನಡದಲ್ಲಿ ಏನಿಲ್ಲ ಎನ್ನುವಂತಿಲ್ಲ. ಎಲ್ಲವೂ ಇದೆ. ಇದನ್ನು ಪಡೆದುಕೊಳ್ಳುವ ತಾಕತ್ತು ಕನ್ನಡದ ಮಣ್ಣಿನ ಮಕ್ಕಳಿಗಿರಬೇಕಷ್ಟೇ.
ಇದು ಆದಾಗಲೇ ಕನ್ನಡ ಅನ್ನದ ಭಾಷೆಯಾಗುತ್ತದೆ. ಚಿನ್ನದ ಭಾಷೆಯೂ ಆಗುತ್ತದೆ. ನಮ್ಮ ಕನ್ನಡ ಭಾಷೆಯ ಮುಂದೆ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳು ಏನೇನು ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬಿಟ್ಟು ಮೇಲರಿಮೆ ಹೊಂದಿ ಅಭಿಮಾನದಿಂದ ಕನ್ನಡ ನಾಡು ಕಟ್ಟುವ ಕೆಲಸವನ್ನು ಮಾಡಬೇಕೆಂದ ಅವರು, ಕನ್ನಡವನ್ನು ಯಾರೂ ಬೆಳೆಸಬೇಕಾಗಿಲ್ಲ ಈಗಾಗಲೇ ಅದು ಬೃಹತ್ ಪ್ರಾಚೀನ ವೃಕ್ಷ ವಾಗಿ ಬೆಳೆದಿದೆ.ಅದರ ಅಡಿಯ ತಂಪು ನೆರಳಲ್ಲಿ ನಾವು ಬೆಳೆದು ಕನ್ನಡದ ಕೀರ್ತಿಯನ್ನು ಬೆಳಗ ಬೇಕಾಗಿದೆ ಎಂದ ಅವರು, ಸಾವಿರ ವರ್ಷಗಳ ಹಿಂದೆಯೇ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೇಳಿದ ನಮ್ಮ ಕನ್ನಡದ ಆದಿ ಕವಿ ಪಂಪನ ಮಾನವೀಯ ದನಿಗೆ ಧ್ವನಿಗೂಡಿಸಿ ತಮ್ಮಿಡೀ ಜೀವ-ಜೀವನವನ್ನು ಸಮಾಜ ಸುಧಾರಣೆಗಾಗಿ ಮೀಸಲಿಟ್ಟಿದ್ದ ಕನಕದಾಸರು ಅಕ್ಷರಶಃ ಅಪರಂಜಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಹಿಂದ ಜವರಪ್ಪ, ಅರವಳಿಕೆ ತಜ್ಞ ವೈದ್ಯ ಡಾ.ಶ್ಯಾಮ್ ಪ್ರಸಾದ್, ಸಾಹಿತಿ ಸೋಸಲೆ ಗಂಗಾಧರ ಅವರುಗಳು ಕಾರ್ಯಕ್ರಮ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರೈಲ್ವೆ ಇಲಾಖೆಯ ಸಹಾಯಕ ಉಪ ನಿರೀಕ್ಷಕರೂ ಆದ ಕವಿ ಗೋವಿಂದಸ್ವಾಮಿ ಗುಂಡಾಪುರ ಮತ್ತು ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ನ ರಾಜ್ ಕಾಮಯ್ಯ ಹಾಗೂ ಸಮಾಜಸೇವಕ ಮಹದೇವಸ್ವಾಮಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಅವರು, ಕನ್ನಡ ಚಲನ ಚಿತ್ರ ಗೀತೆಗಳ ಕರೋಕೆ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾವಂತ ಗಾಯಕ-ಗಾಯಕರಿಗೆ ಬಹುಮಾನ ವಿತರಿಸಿ ಅಭಿನಂದಿಸಿ ಮಾತನಾಡಿದರು.ಟ್ರಸ್ಟ್ ನ ಅಧ್ಯಕ್ಷ ಸೋಸಲೆ ಸಿದ್ದರಾಜು, ಕಾರ್ಯದರ್ಶಿ ರವಿಕುಮಾರ್, ಖಜಾಂಜಿ ಎಸ್. ಆರ್. ತಿರುಮಲಯ್ಯ ಟ್ರಸ್ಟಿಗಳಾದ ಇ.ರಂಗಸ್ವಾಮಿ, ಡಿ.ಕುಮಾರ, ಕೆ.ಎಂ.ಶಿವರಾಜು, ಕೆ.ಎಸ್. ಕುಮಾರಸ್ವಾಮಿ ಹಾಗೂ ಸಿದ್ದು ಬದನವಾಳು, ನಾರಾಯಣ ಸ್ವಾಮಿ, ಜಯಶಂಕರ ಮೇಸ್ತಿ, ದೇವಾನಂದ ವರಪ್ರಸಾದ್, ತಿರುಮಲೇಶ್,ಪತ್ರಕರ್ತ ಕೆ.ಮಹೇಶ್ ಇನ್ನಿತರರು ಭಾಗವಹಿಸಿದ್ದರು.