ಚಿತ್ರದುರ್ಗ: ಜಿಲ್ಲಾಡಳಿತ, ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಸಶಸ್ತ್ರಪಡೆಗಳ ಧ್ವಜ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ದೇಶದಲ್ಲಿ ಸೈನಿಕರ ಪಾತ್ರ ಮಹತ್ವವಾಗಿದ್ದು, ದೇಶದ ರಕ್ಷಣೆಗಾಗಿ ಸೈನಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ, ಪ್ರೋತ್ಸಾಹಿಸಲು ಹಾಗೂ ಅವರ ಕುಟುಂಬಗಳಿಗೆ ಬೆಂಬಲ ಒದಗಿಸಲು ಸಶಸ್ತ್ರ ಪಡೆಗಳ ಧ್ವಜನಿಧಿಗೆ ಉದಾರ ಕಾಣಿಕೆ ನೀಡಲು ಸಶಸ್ತ್ರಪಡೆಗಳ ಧ್ವಜ ದಿನಾಚರಣೆಯು ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಮುತುವರ್ಜಿವಹಿಸಿ ಮಾಜಿ ಸೈನಿಕರ ಶ್ರೈಯೋಭಿವೃದ್ಧಿಗೆ ಹಾಗೂ ಕಲ್ಯಾಣ ಕಾರ್ಯಕ್ಕಾಗಿ ನಿಗಧಿತ ಗುರಿಗಿಂತ ಹೆಚ್ಚಿನ ನಿಧಿಯನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿವೇಶನಕ್ಕೆ ಜಾಗ ಮಂಜೂರು ಮಾಡಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಚಟುವಟಿಕೆ, ಕುಂದು ಕೊರತೆಗಳ ಸಭೆ ನಡೆಸಲು ಚಿತ್ರದುರ್ಗ ನಗರದಲ್ಲಿ ಕಚೇರಿ ನಡೆಸಲು ಜಾಗದ ಅವಶ್ಯಕತೆ ಇದೆ. ಸಂಘದ ಕಾರ್ಯಚಟುವಟಿಕೆಗಾಗಿ ನಗರದ ವೀರಸೌಧ ಸೂಕ್ತವಾಗಿದ್ದು, ಈಗಾಗಲೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ ಎಂದು ತಿಳಿಸಿದ ಅವರು, ಇದರ ಜೊತೆಗೆ ಈ ಹಿಂದೆ ಜಿಲ್ಲೆಯ 35 ಜನ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದ್ದು, ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮಾಜಿ ಸೈನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಚಟುವಟಿಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ವೀರಸೌಧವನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಧ್ವಜ ಬಿಡುಗಡೆ ಸಮಾರಂಭದಲ್ಲಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿಬ್ಬಂದಿಗಳಾದ ವಿ.ನಾರಾಯಣಮೂರ್ತಿ, ಜಿ.ಆರ್.ಬಾಲು, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ, ಸಂಘದ ಸದಸ್ಯರಾದ ಜೈರುದ್ಧೀನ್, ವೆಂಟಕೇಶ ರೆಡ್ಡಿ, ಹನುಮಂತರೆಡ್ಡಿ, ವೃಷಭೇಂದ್ರಪ್ಪ, ಸೂರಯ್ಯ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ಇದ್ದರು.