ಮೈಸೂರು : ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಆರ್. ಲೋಕನಾಥ್ ಅವರು ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ನೀಡಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳ ಜೊತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ೫೨೪೪ ಮತದಾರರು ಸೇರ್ಪಡೆಗೊಂಡಿದ್ದರು. ಹಕ್ಕು ಮತ್ತು ಆಕ್ಷೇಪಣೆಯ ಅವಧಿಯಲ್ಲಿ ೩೦೨೩ ಮತದಾರರು ಸೇರ್ಪಡೆಗೊಂಡಿದ್ದು, ಒಟ್ಟು ೮೨೬೭ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ಸೇರ್ಪಡೆಗೆ ಕಲ್ಪಿಸಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಅರ್ಹ ಮತದಾರರು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಕುರಿತು ರಾಜಕೀಯ ಪಕ್ಷಗಳ ವತಿಯಿಂದ ಜಾಗೃತಿ ಮೂಡಿಸಿ ಸಹಕರಿಸಲು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದನ್ವಯ ಯಾವುದೇ ಹಂತದಲ್ಲಿಯೂ ಒಬ್ಬರೇ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿದಲ್ಲಿ ಸ್ವೀಕರಿಸುವುದಿಲ್ಲ ಎಂದರು.
ಮತದಾರರ ಸಹಾಯವಾಣಿ : ಮತದಾರರ ಸಹಾಯವಾಣಿ ೧೯೫೦ ಪ್ರಾರಂಭಿಸಲಾಗಿದ್ದು,ಮತದಾಯ ಪಟ್ಟಿ ಪರಿಷ್ಕರಣೆ ಮತ್ತು ಮತದಾಯ ಪಟ್ಟಿಯಲ್ಲಿ ಹೆಸರು ನೋಂದಣಿ,ತೆಗೆದುಹಾಕುವುದು ಹಾಗೂ ತಿದ್ದುಪಡಿ ಹಾಗೂ ಇತರೆ ಯಾವುದೇ ಚುನಾವಣಾ ಸಂಭಂಧಿತ ಮಾಹಿತಿ ಪಡೆಯಲು ಸಾರ್ವಜನಿಕರು ಸಹಾಯವಾಣಿ ಉಪಯೋಗಿಸಿಕೊಳ್ಳಬಹುದಾಗಿದೆ.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಕೆ.ಸಿ ಶೌಕತ್ ಪಾಶ, ಜೆಡಿಎಸ್ ನ ಫಾಲ್ಕನ್ ಬೋರೇಗೌಡ, ಬಿಜೆಪಿ ಪಕ್ಷದ ವಸಂತ್ ಕುಮಾರ್, ಪಾಪಣ್ಣ , ಆಮ್ ಆದ್ಮಿ ಪಾರ್ಟಿಯ ಐಶ್ವರ್ಯ, ಬಿಎಸ್ಪಿ ಪಕ್ಷದ ಮಹದೇವಸ್ವಾಮಿ.ಬಿ, ಚುನಾವಣಾ ಶಿರಸ್ತೇದಾರರಾದ ಸುರೇಶ್ ಹಾಗೂ ಚುನಾವಣಾ ಶಾಖೆಯ ರಾಕೇಶ್ ಉಪಸ್ಥಿತರಿದ್ದರು.