ನನಗೆ 91 ವರ್ಷ, ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಎಚ್.ಡಿ. ದೇವೇಗೌಡ
ಹಾಸನ: ಎಚ್.ಡಿ. ದೇವೇಗೌಡರೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಚರ್ಚೆಗಳು ಕ್ಷೇತ್ರದಾದ್ಯಂತ ನಡೆಯುತ್ತಿವೆ. ನನಗೆ 91 ವರ್ಷ ವಯಸ್ಸಾಗಿದೆ. ನಾನು ನಿಲ್ಲುವುದಿಲ್ಲ. ಅದಕ್ಕಾಗಿ ಹಾಲಿ ಸಂಸದ ಪ್ರಜ್ವಲ್ ಅವರನ್ನು ಕಣಕ್ಕೆ ಇಳಿಸಲು ನಾನೇ ನಿರ್ಣಯ ಮಾಡಿದ್ದೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಯ ಚುನಾವಣೆ ನಾನು ನಿಲ್ಲುತ್ತೇನೆ ಎನ್ನುವ ಭಾವನೆ ಮೂಡಿಸಲು ಕೆಲವರು ಪ್ರಯತ್ನ ಮಾಡಿದ್ದರು. ಪ್ರಜ್ವಲ್ ರೇವಣ್ಣ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ, ಮತವನ್ನು ನೀಡಲು ನಾನಾಗಿಯೇ ಹೋಗಿ ಜನಗಳ ಮುಂದೆ ಕೈ ಚಾಚಿ ಕೇಳುತ್ತೇನೆ ಎಂದು ಹೇಳಿದರು.
ಎನ್ಡಿಎ ಮೈತ್ರಿ ಆದ ನಂತರ ಯಾರಿಗೆ ಎಷ್ಟು ಸೀಟು ಎಂಬುದು ನಿರ್ಣಯ ಆಗಿಲ್ಲ. ಪ್ರಜ್ವಲ್ ಹಾಸನ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಗೊಂದಲಗಳು ಇರಬಾರದು. ಮುಂದಿನ ತಿಂಗಳು ಮತ್ತೆ ಪ್ರವಾಸ ಮಾಡುತ್ತೇನೆ. ನಂತರ ಹೋಬಳಿಗಳಿಗೆ ಹೋಗಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದರು.
ನಾನು ಈ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಹೋಗಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ಸಿದ್ದತೆ ಮಾಡುತ್ತಿದ್ದು, ಬೇಲೂರು, ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಪ್ರಚಾರವನ್ನು ಮುಗಿಸಿದ್ದೇನೆ. ಇಂದು ಸಕಲೇಶಪುರ ತಾಲ್ಲೂಕು ಮುಗಿಸಿ ಧರ್ಮಸ್ಥಳಕ್ಕೆ ಹೋಗುತ್ತಿದ್ದು, ಫೆಬ್ರುವರಿಯಲ್ಲಿ ಮತ್ತೆ ಬರುತ್ತೇನೆ. ಉಳಿದ ತಾಲ್ಲೂಕುಗಳಲ್ಲಿ ಸಹ ಪ್ರವಾಸ ಮಾಡಲಿದ್ದೇನೆ. ಪ್ರಜ್ವಲ್ ರೇವಣ್ಣ, ಎಚ್.ಡಿ. ರೇವಣ್ಣ, ಆಯಾ ಕ್ಷೇತ್ರದ ಶಾಸಕರು ಪಕ್ಷ ಸಂಘಟನೆಗೆ ಕೆಲಸ ಮಾಡಲಿದ್ದಾರೆ ಎಂದು ದೇವೇಗೌಡರು ಹೇಳಿದರು.
ನಮ್ಮ ಸರ್ಕಾರ ಯಾರು ತೆಗೆದರು? ನಾನು ಪ್ರಧಾನಿಯಾಗಿ ದಿನಕ್ಕೆ 18 ಗಂಟೆ ಕೆಲಸ ಮಾಡಿದ್ದೇನೆ. ಲಕ್ಷದ್ವೀಪ ಹಾಗೂ ಅಂಡಮಾನ್ ಬಿಟ್ಟು ದೇಶದ ಎಲ್ಲೆಡೆ ಸುತ್ತಿ ಅನೇಕ ಸಮಸ್ಯೆ ಬಗೆಹರಿಸಿದ್ದೇನೆ. ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರು. ನಂತರ ನಡೆದ ಬೆಳವಣಿಗೆ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದರು.