ಮೈಸೂರು: ಬಸವಣ್ಣನವರು ಮಾನವ ಏಳಿಗೆಗೆ ಶ್ರಮಿಸಿದ ಮಹಾನ್ ಮಾನವತಾವಾದಿಗಳು ಎಂದು ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಇಂದು ಶುಕ್ರವಾರ ಅಕ್ಷಯ ತೃತೀಯದಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಬಸವ ಜಯಂತಿಯಲ್ಲಿ ಶ್ರೀ ಜಯರಾಜೇಂದ್ರರು ಮಾತನಾಡುತ್ತಾ ತಿಳಿಸಿದರು.
ಭಾರತ ದೇಶದಲ್ಲಿ ಅನೇಕ ಸಂತರು, ಮಹಾತ್ಮರು, ಶರಣರು, ದಾಸವರಣ್ಯೇರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಜನರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅಂತಹವರಲ್ಲಿ ಬಸವಣ್ಣನವರು ಅಗ್ರಗಣ್ಯರು. ಈ ಭೂಮಿಯ ಮೇಲೆ ಮನುಷ್ಯ ಜನ್ಮ ತಾಳುವುದು ಬಹು ದೊಡ್ಡದು. ಭಗವಂತ ಮನುಷ್ಯನಿಗೆ ಅಪರೂಪದ ಕಲೆಯನ್ನು ನೀಡಿದ್ದಾನೆ, ಅದೇ ಯಾವ ಜೀವಿಗೂ ಇಲ್ಲದ ಮಾತನಾಡುವ ಕಲೆ. ಅದನ್ನು ಬಸವಣ್ಣನವರು ಹೇಗೆ ಬಳಸಬೇಕೆಂಬದನ್ನು ಅವರ ವಚನದಲ್ಲಿ ಅರ್ಥಗರ್ಭಿತವಾಗಿ ತಿಳಿಸಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ಅಂತರಂಗದಲ್ಲಿರುವ ಮಾತೇ ಬಹಿರಂಗದಲ್ಲೂ ಬರಬೇಕು. ನಡೆ ಮತ್ತು ನುಡಿ ಎರಡು ಒಂದೇ ಆಗಿರಬೇಕು. ಯಾರನ್ನೋ ಮೆಚ್ಚಿಸಲು ಮಾತನಾಡದೇ ನಮ್ಮ ಅಂತರಂಗ ಒಪ್ಪಿಕೊಳ್ಳುವ ಮಾತಗಳನ್ನಾಡಬೇಕು ಎಂದಿದ್ದಾರೆ ಎಂದು ಹೇಳಿದರು.
ಲಕ್ಕರಸನಪಾಳ್ಯ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಹೇಮಂತಕುಮಾರ್ರವರು ಸಮಾಜದಲ್ಲಿ ಸಮಾನತೆಯನ್ನು ಬಿತ್ತಿದ ಮಹಾತ್ಮರು ಬಸವಣ್ಣನವರು. ಯಾವುದೇ ಜಾತಿ, ಮತ, ವರ್ಣ, ಲಿಂಗ ಭೇದಗಳಿಲ್ಲಿದೆ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದರು. ದೇವರು ಬೇರೆಲ್ಲೂ ಇಲ್ಲ, ನಮ್ಮೊಳಗೆಯೇ ಇದ್ದಾನೆ ಎಂಬುದನ್ನು ಅರುಹಿದ್ದಾರೆ ಎಂದು ತಿಳಿಸಿದರು.
ಭದ್ರಾವತಿ ಶ್ರೀ ಬಿಳಕಿ ಹಿರೇಮಠದ ಶ್ರೀ ಗುರುಪ್ರಸಾದ ದೇವರು ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ವಚನ ಕ್ರಾಂತಿ ೨೧ನೇ ಶತಮಾನದ ಜೀವನದ ಎಲ್ಲ ಜಂಜಾಟಗಳಿಗೂ ಪರಿಹಾರವನ್ನು ಒದಗಿಸುತ್ತಿವೆ. ಬಸವಾದಿ ಶರಣರ ವಚನಗಳು ಸಾರ್ವಕಾಲಿಕವಾದವು. ವ್ಯಕ್ತಿಗಿಂತ ವ್ಯಕ್ತಿತ್ವದ ಪೂಜೆ ಮುಖ್ಯ. ಭಾವಚಿತ್ರವನ್ನು ಪೂಜಿಸುವುದರ ಜೊತೆಗೆ ಅವರ ಚರಿತ್ರೆಯನ್ನು ಪೂಜಿಸಬೇಕು. ಗುರುಹಿರಿಯರನ್ನು ಗೌರವಿಸಬೇಕು. ಅಂತರಂಗ ಮತ್ತು ಬಹಿರಂಗ ಎರಡು ಒಂದೇ ತೆರನಾಗಿರಬೇಕು ಎಂದು ಹೇಳಿದರು.
ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪಾಂಜಲಿ ಸಲ್ಲಿಸಲಾಯಿತು. ಕೆ.ಜಿ. ವಿನುತ ಮತ್ತು ಸುಮಂಗಲ ಜಂಗಮಶೆಟ್ಟಿಯವರು ವಚನಗಾಯನ ನಡೆಸಿಕೊಟ್ಟರು. ಗೋಡೆಕೆರೆ ಶ್ರೀ ಸ್ಥಿರ ಪಟ್ಟಾಧ್ಯಕ್ಷರ ಮಠದ ಶ್ರೀ ಸಿದ್ಧೇಶ ದೇವರು ಸ್ವಾಗತಿಸಿದರು. ಶ್ರೀ ಕುಮಾರಸ್ವಾಮಿ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶ್ರೀಮಠದ ಗುರುಕುಲ ಸಾಧಕರು ಹಾಗೂ ಸೇವಾ ಸಿಬ್ಬಂದಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.