ರಾಮನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆ – ೨೦೨೪ ರ ಅಂಗವಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ.
ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಛಾಯಾಗ್ರಾಹಕ ಹೆಚ್ ಫಕ್ರುದ್ಧೀನ್ ಪ್ರಥಮ, ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ಬಿ ದಸ್ತೇನವರ ದ್ವೀತಿಯ, ಮೂಡಬಿದಿರೆಯ ಹವ್ಯಾಸಿ ಛಾಯಾಗ್ರಾಹಕ ಜಿನೇಶ್ ಪ್ರಸಾದ್ ತೃತೀಯ, ಸಮಾದಾನಕರ ಬಹುಮಾನಕ್ಕೆ ಇಬ್ಬರು ಆಯ್ಕೆಯಾಗಿದ್ದು ಉಡುಪಿಯ ಉದಯವಾಣಿ ಪತ್ರಿಕೆಯ ಅಸ್ಟ್ರೋ ಮೋಹನ್ ಹಾಗೂ ಬೆಂಗಳೂರಿನ ಸಂಜೆ ಸಮಯ ಪತ್ರಿಕೆಯ ಶ್ರೀಮತಿ ಪೂರ್ಣಿಮ ರವಿ ಮತ್ತು ವಿಶೇ ಬಹುಮಾನಕ್ಕೆ ಸಹ ಇಬ್ಬರು ಆಯ್ಕೆಯಾಗಿದ್ದು ಮೈಸೂರಿನ ವಿಜಯವಾಣಿ ಪತ್ರಿಕೆಯ ಕೆ.ಹೆಚ್ ಚಂದ್ರು ಹಾಗೂ ಕಲಬುರಗಿಯ ವಿಜಯ ಕರ್ನಾಟಕ ಪತ್ರಿಕೆಯ ಶಿವಶರಣಪ್ಪ ಬೆನ್ನೂರ್ ಅವರು ವಿಜೇತರಾಗಿದ್ದಾರೆ.

ರಾಜ್ಯಮಟ್ಟದ ಈ ಛಾಯಾಚಿತ್ರ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಧ್ಯಮ ವಿಭಾಗದ ವಿಷೇಶ ಅಧಿಕಾರಿ ಎ.ವಿ.ಸೂರ್ಯಸೇನ್, ಐ.ಎಫ್.ಎಸ್, ಸದಸ್ಯರಾಗಿ ರಾಜ್ಯಮಟ್ಟದ ಸ್ವೀಪ್ ಹಿರಿಯ ಸಮಾಲೋಚಕರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಛಾಯಾಚಿತ್ರ ವಿಭಾಗದ ಅಧಿಕಾರಿ ಚಂದ್ರಶೇಖರ್, ನಿವೃತ್ತ ಹಾಗೂ ಹಿರಿಯ ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಸಹಾಯಕ ನಿರ್ದೇಶಕರಾದ ಜಡಿಯಪ್ಪ ಗೆದ್ಲಗಟ್ಟಿ ಅವರನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ನೇಮಿಸಲಾಗಿತ್ತು.

ಸಾರ್ವತ್ರಿಕ ಲೋಕಸಭಾ ಚುನಾವಣೆ – ೨೦೨೪ ರ ಮತದಾನ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ ೨೬ ಮತ್ತು ಮೇ ೭ ರಂದು ಎರಡು ಹಂತದಲ್ಲಿ ಜರುಗಿತ್ತು. ಜಗತ್ತಿನ ಅತಿದೊಡ್ಡ ಪ್ರಜಾಪಭುತ್ವ ದೇಶವಾಗಿರುವ ನಮ್ಮ ಭಾರತದಲ್ಲಿ ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ’ದಂತೆ ಆಚರಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ – ೨೦೧೯ ಹಾಗೂ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆ-೨೦೨೩ ರ ಸಂದರ್ಭದಲ್ಲಿ ಸಹ ಮಾಧ್ಯಮಗಳಲ್ಲಿ ಕಾರ್ಯ ನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾ ಚಿತ್ರಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಭಾರತ ಚುನಾವಣಾ ಆಯೋಗ ಪ್ರಶಂಸಿವುದರ ಜೊತೆಗೆ, ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ನಮ್ಮ ರಾಜ್ಯದ ಈ ಛಾಯಾಚಿತ್ರಗಳನ್ನು ಬಳಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ನಿಮಿತ್ತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಮಾಧ್ಯಮಗಳಲ್ಲಿ ಕಾರ್ಯ ನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರು ಸೇರಿ ಒಟ್ಟು ೨೧೯ ಜನರು ಭಾಗವಹಿಸಿದ್ದರು. ಛಾಯಾಗ್ರಹಕರು ತಾವು ತೆಗೆದ ಗರಿಷ್ಠ ೫ ಅತ್ಯುತ್ತಮ ಛಾಯಾಚಿತ್ರಗಳನ್ನು ಕಳುಹಿಸಿದ್ದರು. ಪ್ರಶಸ್ತಿಗೆ ಆಯ್ಕೆಯಾದ ಎಲ್ಲರಿಗೂ ಮುಖ್ಯ ಚುನಾವಣಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.