ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ ಸ್ಪಷ್ಟನೆ ನೀಡಿದೆ.
ಸರ್ಕಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮೂರು ವಿಚಾರಗಳನ್ನು ಪ್ರಸ್ತಾಪ ಮಾಡಲಾಗುತ್ತದೆ. ಆ ಪೈಕಿ ಮುಖ್ಯಮಂತ್ರಿ ಬದಲಾವಣೆಯ ಒಂದು ವಿಷಯ ಬಹಳವಾಗಿ ಚರ್ಚೆಯಾಗುತ್ತಿದೆ. 2023 ರಲ್ಲಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಆಗಿರುವ ತೀರ್ಮಾನದಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ಮಾನ್ಯ ಡಿಸಿಎಂ ಆದ ಡಿ.ಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಪೂರ್ವನಿಯೋಜಿತವಾಗಿದೆ ಎಂಬ ವಿಷಯವನ್ನು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳ ಮುಖೇನ ತಿಳಿದುಕೊಂಡಿದ್ದೇವೆ.
ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತವರು ಡಿಕೆಶಿ, ಈ ಹಿನ್ನಲೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳನ್ನು ನೀಡುವ ಮೂಲಕ ಅತ್ಯದ್ಭುತವಾಗಿ ಆಶೀರ್ವದಿಸಿದ್ದರು. ಈ ಯಶಸ್ಸಿನ ಹಿಂದೆ ಮಾನ್ಯ ಸಿದ್ದರಾಮಯ್ಯನವರ ಪಾತ್ರ ಎಷ್ಟಿದೆಯೋ ಅಷ್ಟೇ ಮಟ್ಟದ ಪಾಲುದಾರಿಕೆ ಮಾನ್ಯ ಡಿ.ಕೆ ಶಿವಕುಮಾರ್ ರವರದೂ ಸಹ ಇದೆ. ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಟ್ರಬಲ್ ಶೂಟರ್ ಆಗಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು, ಬಂದ ತೊಂದರೆಗಳನ್ನೆಲ್ಲ ನಿವಾರಿಸಲು ಅವರು ವಹಿಸಿರುವ ಪಾತ್ರ ಕೂಡ ಮುಖ್ಯವಾಗಿದೆ. ಅದರಂತೆ ಮಾನ್ಯ ಡಿ.ಕೆ ಶಿವಕುಮಾರ್ ರವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವವಿರುವುದರಿಂದ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಕನ್ನಡ ನಾಡಿಗೆ ಅವರಿಂದ ಹೆಚ್ಚಿನ ಸೇವೆ ಲಭ್ಯವಾಗಿ ರಾಜ್ಯಕ್ಕೆ ಒಳಿತಾಗುತ್ತದೆ ಎಂಬ ಆಶಯ ನಮ್ಮದು.
ಈ ಕಾರಣದಿಂದ ಡಿ.ಕೆ ಶಿವಕುಮಾರ್ ರವರು ಮುಖ್ಯಮಂತ್ರಿಯಾಗುವ ಹಾದಿಯನ್ನು ಸುಗಮಗೊಳಿಸಿಕೊಡಬೇಕೆಂದು ನಾವೇ ಯಾರ ಒತ್ತಡವೂ ಇಲ್ಲದೇ ವೈಯಕ್ತಿಕವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಈ ವಿಷಯ ಕಳೆದ 2-3 ದಿನಗಳಿಂದ ಬಹುಚರ್ಚಿತವಾಗುತ್ತಿದ್ದು, ಮಾನ್ಯ ಡಿ.ಕೆ ಶಿವಕುಮಾರ್ ರವರು ನಮ್ಮ ಮೂಲಕ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬದಲಾವಣೆಯ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ಹೇಳಿಸಿದ್ದಾರೆ ಎಂಬ ವಿಷಯವು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಜೊತೆಗೆ ನಮಗೆ ಈಗ ವಯಸ್ಸಾಗಿರುವುದರಿಂದ ನಮಗೆ ಸಹಕರಿಸಲು ನಮ್ಮೊಡನೆ ಬಂದಿದ್ದ ಮಾನ್ಯ ಶ್ರೀ ಬಿ.ಹೆಚ್.ಸುರೇಶ್ ರವರು ಶ್ರೀಮಠದ ಸದ್ಭಕ್ತರಾಗಿದ್ದು, ಸುಮಾರು 23 ವರ್ಷಗಳಿಂದ ಶ್ರೀಮಠದೊಂದಿಗೆ ಸಂಪರ್ಕದಲ್ಲಿರುತ್ತಾರೆ ಹಾಗೂ ಸದರಿಯವರು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಮ್ಮೊಡನೆ ಆಗಾಗ್ಗೆ ಭಾಗವಹಿಸುತ್ತಿರುತ್ತಾರೆ. ಈ ಹೇಳಿಕೆಯು ನನ್ನ ವೈಯಕ್ತಿಕವೇ ಹೊರತು ನನ್ನ ಜೊತೆಯಿದ್ದ ಮಾನ್ಯ ಬಿ.ಹೆಚ್.ಸುರೇಶ್ ರವರದ್ದಾಗಲಿ ಅಥವಾ ಬೇರೆಯಾರದ್ದೇ ಆಗಲಿ ಪಾತ್ರವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.