ಮಂಡ್ಯ: ಕಾವೇರಿ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.
ಪರಿಣಾಮ ಕಾವೇರಿ ನದಿ ಪ್ರವಾಹಕ್ಕೆ ಶ್ರೀರಂಗಪಟ್ಟಣದಲ್ಲಿ ಪ್ರಮುಖ ಸ್ಥಳಗಳು ಜಲಾವೃತಗೊಂಡಿವೆ.
ವೆಲ್ಲೆಸ್ಲಿ ಸೇತುವೆ ನಿಮಿಷಾಂಬ ದೇಗುಲದ ಪ್ರಾಂಗಣ, ಪಾರ್ಕಿಂಗ್ ಸ್ಥಳ ಮುಳುಗುವ ಹಂತಕ್ಕೆ ತಲುಪಿದೆ.ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಪಕ್ಷಿ ಸಂಕುಲ ಆತಂಕದಲ್ಲಿವೆ.
ಮುತ್ತತ್ತಿಗೆ ಪ್ರವಾಸಿಗರು, ಭಕ್ತರ ಪ್ರವೇಶಕ್ಕೆ ನಿಷೇಧ
ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಮಳವಳ್ಳಿ ತಹಶೀಲ್ದಾರ್ ಕೆ.ಎನ್ ಲೋಕೇಶ್ ಆದೇಶ ಹೊರಡಿಸಿದ್ದಾರೆ.

ಕಾವೇರಿ ನದಿ ದಡದಲ್ಲಿ ಅಪಾಯದ ಸೂಚನಾ ಫಲಕವನ್ನು ಪೊಲೀಸರು ಅಳವಡಿಸಿದ್ದಾರೆ. ನೆನ್ನೆ ಸಂಜೆ 6 ಗಂಟೆಯಿಂದ ಪ್ರವಾಹ ಕಡಿಮೆಯಾಗುವವರೆಗೆ ನಿಷೇದಾಜ್ಞೆ ಹೇರಲಾಗಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಕೆಆರ್ ಎಸ್ ನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಡಿಸಿ ಡಾ.ಕುಮಾರ ಸೂಚನೆ ನೀಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕೆ.ಆರ್.ಎಸ್ ಜಲಾಶಯದಿಂದ 1,30,000 ಕ್ಯೂಸೆಕ್ಸ್ ನೀರು ಕಾವೇರಿ ನದಿಗೆ ಹರಿಸಲಾಗುತ್ತಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ-ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವಿ ಮಾಡಿದ್ದಾರೆ.