ಮೈಸೂರು: ವಿಶ್ರಾಂತ ಉದ್ಯೋಗಿಗಳ ಸಂಘ(ರಿ.) ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ.) ಇವರ ಆಶ್ರಯದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜರುಗಿತು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಜ್ಯೋತಿ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಗೋವಿಂದರಾಜು, ವಿಶ್ರಾಂತ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಶ್ರೀ ಉಮಾಕಾಂತ್.ಬಿ.ಆರ್, ತಾಲ್ಲೋಕು ಅಧ್ಯಕ್ಷರುಗಳಾದ ಸಣ್ಣಲಿಂಗಪ್ಪ , ಬಾಲಕೃಷ್ಣ, ಜೋಸೆಫ್ ಆರೋಕ್ಯ, ಎಂ.ಮಹದೇವಯ್ಯ, ಶಿವನಂಜೇಗೌಡ, ಗೋವಿಂದೇಗೌಡ, ಪ್ರಧಾನ ಕಾರ್ಯದರ್ಶಿ ಚಿಕ್ಕಲಿಂಗಸ್ವಾಮಿ, ಖಜಾಂಚಿ ಬಿ.ಕೆ.ಶಿವಾನಂದ, ಉಪಾಧ್ಯಕ್ಷರಾದ ಮರಿಯಾದಾಸ್, ಕೆ.ಎಂ.ನಾಗರಾಜು, ಕೆ.ಟಿ.ವೀರಪ್ಪ, ಕೆ.ಎಂ.ಪುಟ್ಟು ಉಪಸ್ಥಿತರಿದ್ದರು. ಶ್ರೀಮತಿ ನಾಗಮ್ಮ ಪ್ರಾರ್ಥಿಸಿದರು, ಶ್ರೀ ಶ್ರೀಕಂಠೇಶ್ ನಿರೂಪಿಸಿದರು.
ನಂತರ ಮಾತನಾಡಿದ ಎಂ.ಕೆ ಸೋಮಶೇಖರ್ ರವರು ನಿವೃತ್ತ ಸರ್ಕಾರಿ ನೌಕರರು ಎಂದರೆ ಹಲವಾರು ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಅನುಭವಿಗಳು.ನಿವೃತ್ತರ ಅನುಭವಗಳು ಇವತ್ತಿನ ನೌಕರರ ಕೆಲಸ ಕಾರ್ಯಗಳಿಗೆ ತಳಹದಿಯಾಗುತ್ತದೆ.
ಸರ್ಕಾರಿ ನೌಕರರಿಗೆ ವೃತ್ತಿಯಿಂದ ಮಾತ್ರ ನಿವೃತ್ತಿ ಆಗುತ್ತದೆ ಹೊರತು ಜ್ಞಾನ ಮತ್ತು ಅನುಭವಕ್ಕೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದರು. ತಮ್ಮ ವೃತ್ತಿಯುದ್ದಕ್ಕೂ ಇಡೀ ರಾಜ್ಯದ ಉದ್ದಗಲಕ್ಕೂ ವಿವಿಧ ಇಲಾಖೆಗಳಲ್ಲಿ ವಿವಿಧ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿರುತ್ತಾರೆ.

ಸಾಕಷ್ಟು ಅನುಭವ ಮತ್ತು ಅರಿವು ಸಂಪಾದಿಸಿರುತ್ತಾರೆ. ನಿವೃತ್ತರ ಸೇವೆ ಒಂದಲ್ಲ ಒಂದು ರೀತಿ ಸಮಾಜಕ್ಕೆ ಸಿಗುತ್ತಿರುತ್ತದೆ. ನಿವೃತ್ತಿಯ ನಂತರವೂ ದೈಹಿಕ ಚಟುವಟಿಕೆಗಳನ್ನು ಮಾಡಿಕೊಂಡು ಸಧೃಡ ಆರೋಗ್ಯವನ್ನು ಕಾಯ್ದುಕೊಳ್ಳಬೇಕು.ನಿವೃತ್ತರ ಯಾವುದೇ ಸಮಸ್ಯೆಗಳಿಗೆ ದನಿಯಾಗುತ್ತೇನೆ ಎಂದು ತಿಳಿಸಿದರು.