ಚಾಮರಾಜನಗರ : ಕಾಡಾನೆ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಂದ ತಲಾ ೧೦ ಸಾವಿರದಂತೆ ೨೦ ಸಾವಿರ ರೂಗಳ ದಂಢ ಹಾಕಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಅಸನೂರು ಬಳಿ ನಡೆದಿದೆ.
ತೆಲಂಗಾಣ ನಿಜಾಂಪೇಟೆ ಮೂಲದ ದಿಲೀಪ್ ಕುಮಾರ್ (೪೨) ಹಾಗೂ ಶ್ಯಾಂಪ್ರಸಾದ್(೩೧) ದಂಢ ಕಟ್ಟಿರುವ ಪ್ರವಾಸಿಗರು. ಸಂಜೆ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಇವರು ಕೊಯಮತ್ತೂರಿಗೆ ತೆರಳುವಾಗ ಆಸನೂರು ಬಳಿ ಆನೆ ನಿಂತಿದ್ದನ್ನು ಕಂಡಿದ್ದಾರೆ.
ಕಾರಿನಿಂದ ಇಳಿದ ಈ ಇಬ್ಬರು ವ್ಯಕ್ತಿಗಳು ಕಾಡಾನೆಯ ತೀರಾ ಸಮೀಪ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಕಾರು ಹತ್ತಿ ಹೋದರು.ನಂತರ ಬಣ್ಣಾರಿ ಚೆಕ್ ಪೋಸ್ಟ್ ಗೆ ಇವರ ಮಾಹಿತಿ ತಿಳಿಸಿ ಅಲ್ಲಿ ಕಾರನ್ನು ಅಡ್ಡ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವಬ್ದಾರಿ ತೋರಿದ ಇಬ್ಬರಿಗೂ ತಲಾ ೧೦ ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.