ರಕ್ಷಣೆಯ ವೇಳೆ ವಿವಿಧ ಇಲಾಖೆಗಳ ಸಹಕಾರ ಅಗತ್ಯ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ: ಅವಘಡ ಸಂಭವಿಸಿದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿ ಶಾಮಕ, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಜಿಲ್ಲಾಡಳಿತ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ವತಿಯಿಂದ ಬಳ್ಳಾರಿ-ಹೊಸಪೇಟೆಯ ನೂತನ ಹೆದ್ದಾರಿಯಲ್ಲಿ ಏರ್ಪಡಿಸಿದ್ದ ಅನಿಲ ಸೋರಿಕೆ ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೆದ್ದಾರಿಗಳಲ್ಲಿ ಬೃಹತ್ ವಾಹನಗಳಲ್ಲಿ ಎಲ್ಪಿಜಿ ಅನಿಲ ತುಂಬಿಕೊಂಡು ಸಂಚರಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದ ಮಾಹಿತಿ ಬಂದ ತಕ್ಷಣವೇ ವಿವಿಧ ಇಲಾಖೆಗಳ ಜವಾಬ್ದಾರಿಯುತವಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಅನಿಲ ಸೋರಿಕೆ ನಿರ್ವಹಣೆ ಕುರಿತು ಅಣುಕು ಪ್ರದರ್ಶನದಿಂದ ಸಂಬಂಧಿಸಿದ ವಿವಿಧ ಇಲಾಖೆಗಳು ಬಲಗೊಂಡಿದ್ದು, ಘಟನೆ ಸಂಭವಿಸಿದ್ದಲ್ಲಿ ರಕ್ಷಣೆ ಕಾರ್ಯ ಕೈಗೊಳ್ಳಲು ಸಕಲ ರೀತಿ ಸಿದ್ಧತೆಗೊಳಿಸಲಾಗಿದೆ ಎಂದರು. ಎನ್ಡಿಆರ್ಎಫ್ನ ಚೀಪ್ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೂಬೆ ಅವರು ಮಾತನಾಡಿ, ಈ ಭಾಗದ ಬೃಹತ್ ಕಾರ್ಖಾನೆಗಳಲ್ಲಿ ವಿವಿಧ ರೀತಿಯ ಅನಿಲ ಬಳಕೆಯಿದೆ. ಈ ಅಣಕು ಪ್ರದರ್ಶನವು ಉಪಯೋಗವಾಗಲಿದೆ. ಎಲ್ಲಾ ರೀತಿಯ ಸಹಕಾರ ನೀಡಿದ ಜಿಲ್ಲಾಡಳಿತಕ್ಕೆ ಅಭಿನಂಧಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎನ್ಡಿಆರ್ಎಫ್ ತಂಡದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅಗ್ನಿ ಶಾಮಕ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.