ನಂಜನಗೂಡು: ಶಕ್ತಿ ಯೋಜನೆಯಿಂದಾಗಿ ಗಂಟೆಗಟ್ಟಲೆ ವಿದ್ಯಾರ್ಥಿನಿಯರು ಬಸ್ ಗಾಗಿ ಕಾದು ಬಸವಳಿದರೂ ಸಹ ಬಸ್ ನಿಲ್ಲಿಸದ ಕಾರಣ ಸುಮಾರು 6 ಕಿಮೀ ದೂರ ನಡೆದುಕೊಂಡೆ ಶಾಲಾ-ಕಾಲೇಜಿಗೆ ಹಾಜರಾದರು.
ತಾಲೂಕಿನ ದೇಬೂರು, ಬ್ಯಾಳಾರು ಗ್ರಾಮದ ಪ್ರೌಢಶಾಲೆ, ಪಿಯುಸಿ, ಹಾಗೂ ಪದವಿ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆ ಯಿಂದ 9 ಗಂಟೆವರೆಗೆ ಕಾದರೂ ಸಹ ಬಂದ ಬಸ್ಸುಗಳು ಫುಲ್ ರಶ್ ಇದ್ದ ಕಾರಣ ನಿಲ್ಲಿಸದೆ ಹೋದರು. ಎರಡು ಗಂಟೆಗಿಂತಲೂ ಹೆಚ್ಚು ಕಾಲ ಕಾದು ನಿಂತರು ಸಹ ಬಸ್ಸುಗಳು ವಿದ್ಯಾರ್ಥಿಗಳನ್ನು ಕಂಡೊಡನೆ ನಿಲ್ಲಿಸದೆ ಹೋಗುತ್ತಿದ್ದರಿಂದ ಬೇಸತ್ತ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಡೆದುಕೊಂಡೆ ಶಾಲಾ ಕಾಲೇಜುಗಳತ್ತ ಮುಖ ಮಾಡಿದರು.
ಪಿಯುಸಿ ವಿದ್ಯಾರ್ಥಿನಿ ನಮೃತ ಪತ್ರಿಕೆಯೊಂದಿಗೆ ಮಾತನಾಡಿ, ಈ ಮೊದಲು ಅರ್ಧ ಗಂಟೆಗೆ ಒಂದರಂತೆ ಬರುತ್ತಿದ್ದ ಬಸ್ಸುಗಳು ಶಕ್ತಿ ಯೋಜನೆಯಿಂದಾಗಿ ಪ್ರತಿ ಒಂದು ಗಂಟೆಗೆ ಬರುತ್ತಿವೆ. ಜೊತೆಗೆ ಬಂದ ಬಸ್ಸುಗಳೆಲ್ಲ ಹುಲ್ಲಹಳ್ಳಿ ಭಾಗದಿಂದಲೇ ರಶ್ ಆಗಿ ಬರುತ್ತವೆ. ಆದಕಾರಣ ಬಸ್ಸಿನ ಚಾಲಕರು ವಿದ್ಯಾರ್ಥಿಗಳು ಎಂದು ಅಸಡ್ಡೆಯಿಂದ ಬಸ್ಸನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗುತ್ತಾರೆ. ಇದರಿಂದಾಗಿ ನಮಗೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಸ್ ರಶ್ ಆದರೂ ಸಹ ನಾವು ಜೀವದ ಹಂಗು ತೊರೆದು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಇಂದು ಎರಡು ಗಂಟೆಗಳಿಗಿಂತಲೂ ಹೆಚ್ಚುಕಾಲಕ್ಕಾದರೂ ಸಹ ಯಾವುದೇ ಬಸ್ ನಿಲ್ಲಿಸದೆ ಇದರಿಂದ ಬೇಸಿತ್ತು ನಾವೆಲ್ಲರೂ ಮಾತನಾಡಿಕೊಂಡು ನಡೆದೇ ಸಾಗುತ್ತಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ವಿದ್ಯಾರ್ಥಿನಿ ಶಾಲಿನಿ ಮಾತನಾಡಿ, ಶಕ್ತಿ ಯೋಜನೆ ಜಾರಿಯಾದ ಬಳಿಕ ವಿದ್ಯಾರ್ಥಿನಿಯರ ಪಾಡು ಹೇಳತೀರದಾಗಿದೆ ಈ ಬಗ್ಗೆ ಅಧಿಕಾರಿಗಳು ಮತ್ತು ಶಾಸಕರು ಕ್ರಮವಹಿಸಿ ನಿಗದಿತ ಸಮಯಕ್ಕೆ ಬಸ್ ಸಂಚರಿಸುವಂತೆ ಕ್ರಮವಹಿಸಬೇಕು. ಹಾಗೂ ಬಸ್ ನ ಚಾಲಕರಿಗೆ ವಿದ್ಯಾರ್ಥಿನಿಗಳನ್ನು ಕಂಡೊಡನೆ ಬಸ್ ನಿಲ್ಲಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಉಚಿತ ಬಸ್ ಸೌಲಭ್ಯವಿದ್ದರೂ ಸಹ ವಿದ್ಯಾರ್ಥಿಗಳಿಗೆ ನೆರವಾಗದೆ ನಡೆದೇ ಸಾಗುತ್ತಿರುವ ಘಟನೆಗೆ ಸಾರ್ವಜನಿಕರು ಸರ್ಕಾರ ಅಧಿಕಾರಿ ವರ್ಗಕ್ಕೆ ಹಿಡಿ ಶಾಪ ಹಾಕುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ಜಾನವರುಗಳನ್ನು ಸಾಗಿಸುವ ವಾಹನದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುವ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ ಕೂಡಲೇ ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.