ಬೆಂಗಳೂರು: ಇಷ್ಟೆಲ್ಲಾ ದಾಖಲೆ ಸಮೇತ ಮಾಡಿರುವ ದಿನಪತ್ರಿಕೆಯಲ್ಲಿನ ವರದಿಯನ್ನು ನೋಡಿ ಹಾಗೂ ಬಿ.ಜೆ.ಪಿಯು ತಮ್ಮ ದ್ವಂದ್ವ, ದಾರಿ ತಪ್ಪಿಸುವ ಹೇಳಿಕೆಗಳಿಗೆ, ಧರಣಿ ಹೆಸರಲ್ಲಿ ನಡೆಸುವ ಮೆಲೊ ಡ್ರಾಮಾಗಳಿಗೆ ಜನರಲ್ಲಿ ಕ್ಷಮೆಯಾಚಿಸಬೇಡವೇ? ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿಯವರನ್ನು ಆಗ್ರಹಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿಯಿಂದ ಹೆಚ್ಚು ನೋಟಿಸ್ ಎಂಬ ಪ್ತಜಾವಾಣಿಯಲ್ಲಿನ ಲೇಖನ ನೋಡಿದರೆ ಬಿ.ಜೆ.ಪಿಯವರ ನೀಚತನ ಏನೆಂಬುದು ಜನರಿಗೆ ಇನ್ನೂ ಚೆನ್ನಾಗಿ ಅರ್ಥವಾಗಲಿದೆ. 2,865 ಎಕರೆ ವಿಸ್ತೀರ್ಣದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಅವುಗಳ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿತ್ತು. ಬಿಎಸ್ ಯಡಿಯೂರಪ್ಪ 2000ರಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಧಿಸೂಚನೆ ಮಾಡಲಾಗಿದ್ದ ‘ವಕ್ಫ್ ಆಸ್ತಿ’ಗಳಿಗೂ ಈ ಅವಧಿಯಲ್ಲಿ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ.
ಬಿಜೆಪಿ ಸರ್ಕಾರವು 1,735 ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಕೆಲ ರೈತರು ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ತಂದಿದ್ದರು. ಉಳಿದ ಪ್ರಕರಣಗಳಲ್ಲಿ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲು ಕ್ರಮ ತೆಗೆದು- ಕೊಳ್ಳುವಂತೆ ಸಮಿತಿಯು ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ.
4,720 ಎಕರೆ ವಿಸ್ತೀರ್ಣದ ಜಮೀನು ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಅವುಗಳು ಅಕ್ರಮ ಪರಭಾರೆ ಆಗಬಾರದು ಎಂದು ಪಹಣಿಯಲ್ಲಿ ‘ಫ್ಲಾಗ್ ಅಫ್’ (ಪಹಣಿಯ ಕಾಲಂ 11ರಲ್ಲಿ ವಕ್ಫ್ ಅಸ್ತಿ ಎಂದು ನಮೂದಿಸುವುದು) ಮಾಡಲಾಗಿತ್ತು. ವಕ್ಫ್ ಆಸ್ತಿಗಳ ದಾಖಲೆ, ಸ್ಥಿತಿಗತಿ ಮತ್ತು ಸಂರಕ್ಷಣೆ ಕಾರ್ಯಾಚರಣೆಗಳ ವಿವರವನ್ನು ಒಳಗೊಂಡ ವರದಿಗಳನ್ನು ಶ್ರೀ ಕುಮಾರ್ ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಮಂಡಿಸಿ, ಈ ವರದಿಗಳನ್ನು ಸದನವು ಅಂಗೀಕರಿಸಿತ್ತು ಎಂದು ತಿಳಿಸಿದ್ದಾರೆ.
2020ರ ಸೆಪ್ಟೆಂಬರ್ 10ರಂದು ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ, ‘ವಕ್ಫ್ ಆಸ್ತಿಗಳ ಒತ್ತುವರಿ, ಅಕ್ರಮ ಮಾರಾಟ ಅಥವಾ ಇತರೆ ಯಾವುದೇ ತೊಂದರೆ ಬಂದಲ್ಲಿ, ಅವುಗಳನ್ನು ತೆರವುಗೊಳಿಸಲು ವಕ್ಫ್ ಮಂಡಳಿಯು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಸಮಿತಿ ಹೇಳಿತ್ತು.
‘ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ಪರಿಶೀಲಿಸ ಬೇಕು. ದಾಖಲೆಗಳು ಇಲ್ಲದ ಅಸ್ತಿಗಳಿಗೆ ಸಂಬಂಧಿಸಿದ ಅಕಾರ್ಬಂದ್ಗಳ ಮಾಹಿತಿ ಪರಿಶೀಲಿಸಿ, ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮ ತೆಗೆದು ಕೊಳ್ಳಬೇಕು’ ಎಂದು ಶಿಫಾರಸು ಮಾಡಿತ್ತು.
ಜೊತೆಗೆ, ‘ಗೆಜೆಟ್ ಅಧಿಸೂಚನೆ ಹೊರಡಿಸಲಾಗಿರುವ ಆಸ್ತಿಗಳ ಮೂಲ ಕಂದಾಯ ದಾಖಲೆಗಳನ್ನು ಪರಿಶೀಲನೆ ಮಾಡಿ, ಕಂದಾಯ ಇಲಾಖೆಯ ತಂತ್ರಾಂಶದಲ್ಲಿ ನಮೂದಿಸಬೇಕು. ತಂತ್ರಾಂಶದಲ್ಲಿ ಆ ಆಸ್ತಿಗಳನ್ನು ಲಾಕ್ ಮಾಡಿಸುವ ಮೂಲಕ ಪರಭಾರೆ, ಒತ್ತುವರಿ ಮತ್ತು ಅಕ್ರಮ ಮಾರಾಟಕ್ಕೆ ಅವಕಾಶವಿರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಮಿತಿ ಶಿಫಾರಸಿನಲ್ಲಿ ಹೇಳಿತ್ತು. 2022ರಲ್ಲಿ ಸಮಿತಿಯು ಮತ್ತೊಂದು ವರದಿಯನ್ನು ಸದನದಲ್ಲಿ ಮಂಡಿಸಿತ್ತು. 2020ರ ವರದಿಯಲ್ಲಿ ಮಾಡಿದ್ದ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ಅದಕ್ಕೆ ಸಂಬಂಧಿಸಿದ ಸುಮಾರು 6,000 ಪುಟಗಳಷ್ಟು ದಾಖಲೆಗಳನ್ನು ವರದಿಯೊಂದಿಗೆ ಲಗತ್ತಿಸಲಾಗಿತ್ತು.
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯು ವಕ್ಸ್ ಆಸ್ತಿ ಎಂಬುದನ್ನು ಬಿಜೆಪಿ ಸರ್ಕಾರದ ಅವಧಿಯ ಸಮಿತಿ ವರದಿಯಲ್ಲಿ ಗುರುತಿಸಿದೆ. ಜತೆಗೆ ಈ ವರದಿಯನ್ನು ವಿಧಾನಸಭೆ ಅಂಗೀಕರಿಸಿದೆ. ವಕ್ಫ್ ಆಸ್ತಿಗಳ ಮುಂದೆ ಆಯಾ ವಕ್ಫ್ ಸಂಸ್ಥೆಗಳ ಹೆಸರನ್ನೂ ನಮೂದಿಸಬೇಕು. ಆ ಮೂಲಕ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಿ ಎಂದು ಸಹ ಸಮಿತಿ ಶಿಫಾರಸು ಮಾಡಿದೆ.
ಈಗಾಗಲೇ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ ವಕ್ಛ್ ಹೆಸರಿನಲ್ಲಿ ಯಾವುದೇ ನೋಟಿಸ್ ಗಳನ್ನು ನೀಡಬಾರದು, ನೋಟಿಸ್ ನೀಡಿದ್ದರು ಸಹ ಕೂಡಲೇ ವಾಪಸ್ಸು ಪಡೆಯಲು ಆದೇಶಿಸಿದ್ದಾರೆ. ಅದರಂತೆ ವಾಪಸ್ಸು ಕೂಡ ಪಡೆಯಲಾಗಿದೆ ಎಂದು ಹೇಳಿದ್ದಾರೆ.