ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ವಿವಿದೆಡೆಗಳಲ್ಲಿ ಶಾಖೆಗಳನ್ನು ತೆರೆದು ಜನಸ್ನೇಹಿಯಾಗಿರುವ ನವ ನಗರ ಅರ್ಬನ್ ಬ್ಯಾಂಕಿನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು ಇಂತಹ ವರ್ತನೆ ಸರಿಯಲ್ಲ ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್ಗೌಡ ಹೇಳಿದರು.
ಪಟ್ಟಣದ ನವ ನಗರ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ನಡೆದ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರ ೫೨ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರಿ ಧುರೀಣರೂ ಆಗಿದ್ದ ಮಾಜಿ ಸಚಿವರಾದ ದಿ.ಎಸ್.ನಂಜಪ್ಪನವರು ದೂರದೃಷ್ಠಿಯಿಂದ ಆರಂಭಿಸಿದ್ದ ಬ್ಯಾಂಕಿನ ಏಳಿಗೆ ಸಹಿಸದವರು ಮಾಡುತ್ತಿರುವ ಅಪಪ್ರಚಾರಕ್ಕೆ ಯಾರು ಕಿವಿಗೊಡಬಾರದು ಎಂದರು.
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಹಿಡಿದು ಎಲ್ಲಾ ವರ್ಗದವರಿಗೂ ಸಾಲ ನೀಡುವ ಮೂಲಕ ಜನಪರವಾಗಿರುವ ಬ್ಯಾಂಕ್ ಅನ್ನು ಕೆ.ಎನ್.ಬಸಂತ್ ಮುನ್ನಡೆಸಿಕೊಂಡು ಹೋಗುತ್ತಿದ್ದು ಇವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮ ರಾಜಕೀಯ ಅವಕಾಶ ಮತ್ತು ಅಧಿಕಾರ ದೊರಕಲಿ ಎಂದು ಹಾರೈಸಿದ ಜಿ.ಡಿ.ಹರೀಶ್ಗೌಡ ಜನರ ಆಶೀರ್ವಾದದಿಂದ ಉತ್ತುಂಗಕ್ಕೇರಲಿ ಎಂದು ಕೋರಿದರು.
ಮಾಜಿ ಮೂಡಾ ಅಧ್ಯಕ್ಷ ಎಚ್.ಎನ್.ವಿಜಯ್ ಮಾತಾಡಿ ನವ ನಗರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರು ಭವಿಷ್ಯದಲ್ಲಿ ತೆಗೆದುಕೊಳ್ಳುವ ಎಲ್ಲಾ ರಾಜಕೀಯ ನಿರ್ಧಾರಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ರಾಜಕಾರಣ ನಿಂತ ನೀರಲ್ಲ ನಾವು ಜನರ ನಡುವೆ ಇದ್ದರೆ ಅಧಿಕಾರ ದೊರೆಯುವುದರ ಜತೆಗೆ ಗೌರವವು ಸಿಗುತ್ತದೆ ಹಾಗಾಗಿ ನಮ್ಮ ಹಿತೈಷಿಗಳಾದ ಕೆ.ಎನ್.ಬಸಂತ್ ಅವರಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಇವೆ ಎಂದರು.
ರಾಜಕೀಯ ಕ್ಷೇತ್ರಕ್ಕೆ ದುಮುಕಿದ ಮೇಲೆ ಯಾವುದಕ್ಕೂ ಅಂಜಬಾರದು ಮತದಾರರನ್ನೇ ದೇವರೆಂದು ಭಾವಿಸಿದರೆ ಅವರ ಆಶೀರ್ವಾದದಿಂದ ಬಯಸಿದ್ದನ್ನು ಸುಲಭವಾಗಿ ಪಡೆಯಬಹುದು ಎಂದು ಕಿವಿ ಮಾತು ಹೇಳಿದ ಮುಡಾ ಮಾಜಿ ಅಧ್ಯಕ್ಷರು ನಿಮ್ಮ ಬೆನ್ನಹಿಂದೆ ನಾನು ಸೇರಿದಂತೆ ಸಾವಿರಾರು ಮಂದಿ ಇದ್ದು ಇದರಿಂದ ಒಳ್ಳೆಯ ದಿನಗಳು ಬರಲಿವೆ ಎಂದು ನುಡಿದರು.

ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಂ.ಟಿ.ಅಣ್ಣೇಗೌಡ, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್.ಹರಿಚಿದ0ಬರ, ಗ್ರಾ.ಪಂ. ಮಾಜಿ ಸದಸ್ಯರಾದ ಹೊಸಹಳ್ಳಿಪುಟ್ಟರಾಜು, ಪ್ರಭಾಕರ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ಮುಖಂಡರಾದ ಮಿರ್ಲೆರಾಜೀವ್, ಎಂ.ಎನ್.ರಾಜೇಶ್, ಭೀಮರಾವ್ಸಾಠೆ, ಎಸ್.ಪಿ.ತ್ಯಾಗರಾಜು ಮತ್ತಿತರರು ಇದ್ದರು.