ಹಾಸನ: ಸಕಲೇಶಪುರ ತಾಲ್ಲೂಕಿನ ಗವಿಬೆಟ್ಟದಲ್ಲಿ ರೀಲ್ಸ್ ಚಿತ್ರೀಕರಣಕ್ಕಾಗಿ ಕೆಲ ಪ್ರವಾಸಿಗರು ಥಾರ್ ಕಾರಿನಲ್ಲಿ ಡ್ರಿಫ್ಟಿಂಗ್ ನಡೆಸಿದ್ದು, ಈ ಕೃತ್ಯದಿಂದ ಪರಿಸರ ಹಾಗೂ ಜಾನುವಾರುಗಳ ಮೇವು ಪ್ರದೇಶಕ್ಕೆ ಹಾನಿಯಾಗಿದೆ.
ವಾಹನಗಳ ಪ್ರವೇಶಕ್ಕೆ ನಿರ್ಬಂಧವಿದ್ದರೂ ನಿಯಮ ಉಲ್ಲಂಘಿಸಿ ಪ್ರವೇಶಿಸಿದ ಪ್ರವಾಸಿಗರು ಮನಬಂದಂತೆ ವಾಹನ ಚಲಾಯಿಸಿದ್ದಾರೆ. ಪರಿಣಾಮ ರಸ್ತೆ ಹಾನಿಗೊಳಗಾಗಿದ್ದು, ಜಾನುವಾರುಗಳ ಮೇವು ಪ್ರದೇಶ ಮಣ್ಣುಪಾಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗವಿಬೆಟ್ಟ ಪ್ರದೇಶದಲ್ಲಿ ಕಾಡೆಮ್ಮೆ, ಮುಳ್ಳುಹಂದಿ, ಕಾಡುಬೆಕ್ಕು, ಕೋತಿ, ನವಿಲು ಸೇರಿದಂತೆ ಹಲವು ವನ್ಯಜೀವಿಗಳು ವಾಸಿಸುತ್ತಿವೆ. ಅಲ್ಲದೆ, ನೀರಿಗಾಗಿ ಈ ಪ್ರದೇಶಕ್ಕೆ ಬರುವ ವನ್ಯಜೀವಿಗಳಿಗೂ ಈ ಘಟನೆ ತೊಂದರೆ ಉಂಟುಮಾಡಿದೆ ಎನ್ನಲಾಗಿದೆ.
ಇನ್ನೂ ಪ್ರವಾಸಿಗರ ಈ ಬೇಜವಾಬ್ದಾರಿಯ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.



