ಬೆಂಗಳೂರು: ವಿದ್ಯುತ್ ವಾಹನ (EV) ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ದೇಶದೊಳಗೆ ಮುಂಚೂಣಿಯಲ್ಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಸುಸ್ಥಿರ ಇಂಧನ ಬಳಕೆಯಲ್ಲಿ ಕರ್ನಾಟಕ ಹೊಸ ಮಾದರಿಯಾಗಿದ್ದು, ಇದರ ಆರಂಭಿಕ ಹೆಜ್ಜೆಗಳು ಯಶಸ್ವಿಯಾಗಿವೆ ಎಂದು ಅವರು ಹೇಳಿದರು.
ಸೋಮವಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬೆಸ್ಕಾಂ ಸ್ಥಾಪಿಸಿರುವ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ EV ಚಾರ್ಜಿಂಗ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
“ಇವಿ ವಾಹನಗಳ ಸಂಖ್ಯೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ, ನಮ್ಮ ಸರ್ಕಾರ ಚಾರ್ಜಿಂಗ್ ಹಬ್ಗಳ ಅಭಿವೃದ್ಧಿಗೆ ಬದ್ಧವಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ‘ಇವಿ ನೀತಿ’ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಚಾರ್ಜಿಂಗ್ ಕೇಂದ್ರವು ಕ್ಯಾಬ್ ಚಾಲಕರು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಲಿದೆ,” ಎಂದು ಜಾರ್ಜ್ ತಿಳಿಸಿದರು.
ಹಬ್ಬಿನ ವೈಶಿಷ್ಟ್ಯತೆ:
ಈ EV ಹಬ್ 23 ವಾಹನಗಳನ್ನು ಒಂದೇ ಸಮಯದಲ್ಲಿ ಚಾರ್ಜ್ ಮಾಡಬಲ್ಲದು. ಇದರಲ್ಲಿ 45 ಕಿಲೋವ್ಯಾಟ್ ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿಲೋವ್ಯಾಟ್-ತಾಸು ಸೆಕೆಂಡ್ ಲೈಫ್ ಬ್ಯಾಟರಿ ಶೇಖರಣೆ ಸಾಮರ್ಥ್ಯವಿದೆ. 18 ಫಾಸ್ಟ್ ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್ಗಳೊಂದಿಗೆ ಸಜ್ಜಿತವಾಗಿದೆ.
ಸೌಲಭ್ಯಗಳು:
ಬೆಸ್ಕಾಂನ ‘EV ಮಿತ್ರ’ ಅಪ್ಲಿಕೇಶನ್ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಉಪಯೋಗದ ಮಾಹಿತಿ ಪಡೆದು, ವಾಟ್ಸಪ್ ಮೂಲಕ ಹಣ ಪಾವತಿಸಿ EV ಚಾರ್ಜ್ ಮಾಡಬಹುದು. ಖಾಸಗಿ ಚಾರ್ಜರ್ಗಿಂತ 2-3 ಪಟ್ಟು ಕಡಿಮೆ ದರದಲ್ಲಿ ಈ ಸೇವೆ ಲಭ್ಯವಿದೆ.
ಪ್ರಗತಿಶೀಲ ರಾಜ್ಯ:
ಈಗಾಗಲೇ ರಾಜ್ಯದಲ್ಲಿ 5,880 EV ಚಾರ್ಜಿಂಗ್ ಸ್ಟೇಷನ್ಗಳಿದ್ದು, ಬೆಂಗಳೂರಿನಲ್ಲಿ ಮಾತ್ರ 4,462 ಕೇಂದ್ರೀಕೃತವಾಗಿದೆ. ಈ ವರ್ಷ 140 ಹೊಸ ಚಾರ್ಜರ್ಗಳು ಅಳವಡಿಸಲ್ಪಟ್ಟಿವೆ.