ಅಹಮದಾಬಾದ್: ಅಹಮದಾಬಾದ್ನಲ್ಲಿ ನಿನ್ನೆ ನಡೆದ ಭೀಕರ ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನ ಅಪಘಾತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡಿರುವ ವ್ಯಕ್ತಿ ರಮೇಶ್ ವಿಶ್ವಾಸ್ ಕುಮಾರ್ (40) ತಮ್ಮ ಅನುಭವವನ್ನು ಭಯಮಿಶ್ರಿತ ಸ್ವರದಲ್ಲಿ ತಿಳಿಸಿದ್ದಾರೆ. ಬ್ರಿಟಿಷ್ ಪೌರತ್ವ ಹೊಂದಿರುವ ಭಾರತೀಯ ಮೂಲದ ರಮೇಶ್, ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಕ್ಷೇಮ ವಿಚಾರಿಸಿದರು.
“ಟೇಕ್ಆಫ್ ಆದ ಒಂದು ನಿಮಿಷದೊಳಗೆ ಏನೋ ಸಮಸ್ಯೆ ಆಗಿದೆ ಎಂದು ಅನ್ನಿಸಿತು. ಹಸಿರು ಹಾಗೂ ಬಿಳಿ ದೀಪಗಳು ಹೊಳೆಯಲು ಶುರುವಾಯಿತು. ಪೈಲಟ್ಗಳು ವಿಮಾನವನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದರು, ಆದರೆ ಅದು ನೇರವಾಗಿ ವೈದ್ಯಕೀಯ ಹಾಸ್ಟೆಲ್ಗೆ ಅಪ್ಪಳಿಸಿತು,” ಎಂದು ವಿಶ್ವಾಶ್ ತಿಳಿಸಿದ್ದಾರೆ.
ಅವರು ಕುಳಿತಿದ್ದ ಸೀಟು 11A ತುರ್ತು ಬಾಗಿಲು ಹತ್ತಿರದಲ್ಲಿದ್ದ ಕಾರಣ, ವಿಮಾನ ನೆಲಕ್ಕೆ ಅಪ್ಪಳಿಸಿದ ಬಳಿಕ ಬಾಗಿಲು ತೆರೆದು ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು. “ನನ್ನೊಂದಿಗೆ ನನ್ನ ಅಂಟಿ, ಅಂಕಲ್ ಮತ್ತು ಗಗನಸಖಿಯರು ಇದ್ದರು, ಅವರು ಕಣ್ಣೆದುರೇ ಸಾವನ್ನಪ್ಪಿದರು,” ಎಂದು ವಿಷಾದಿಸಿದರು.
ಇನ್ನೂ ವಿಶ್ವಾಸ್ ಅವರ ಸೋದರ ಅಜಯ್ ಕುಮಾರ್ ರಮೇಶ್ (11J ಸೀಟು) ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ಯುಕೆಯಲ್ಲಿ 15 ವರ್ಷಗಳಿಂದ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದರು.
ವಿಮಾನ ಹಾರಿದ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದು ಭಾರೀ ಬೆಂಕಿ ಹೊತ್ತಿಕೊಂಡಿತ್ತು. ವಿಮಾನವು 1.25 ಲಕ್ಷ ಲೀಟರ್ ಇಂಧನ ತುಂಬಿದ್ದ ಕಾರಣ, ಪತನವಾದ ಸ್ಥಳವೇ ಸ್ಮಶಾನವಾಗಿ ಮಾರ್ಪಟ್ಟಿತು.
ಎಲ್ಲಾ ಡಿಎನ್ಎ ಪರೀಕ್ಷೆಗಳು ಮುಗಿದ ತಕ್ಷಣ ಸಾವಿನ ಸಂಖ್ಯೆ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.