ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವಿಗೀಡಾದ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಗಳಿಗೆ ಭಾರತ ಮೂಲದ ಯುಎಇ ವೈದ್ಯ ಡಾ. ಶಂಶೀರ್ ಅವರು ಒಟ್ಟು 1 ಕೋಟಿ ರೂ. ಹಣದ ನೆರವು ಘೋಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಅಪಘಾತದಲ್ಲಿ ವಿಮಾನವು ವೈದ್ಯಕೀಯ ಕಾಲೇಜಿನ “ಅತುಲ್ಯಂ ಹಾಸ್ಟೆಲ್” ಕಟ್ಟಡಕ್ಕೆ ಅಪ್ಪಳಿಸಿ 270 ಮಂದಿ ಸಾವನ್ನಪ್ಪಿದರು. ಈ ಅವಘಡದಲ್ಲಿ 30ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಡಾ. ಶಂಶೀರ್ ಅವರು ಘೋಷಿಸಿರುವ ಪರಿಹಾರದಲ್ಲಿ: ಮೃತರಾದ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹20 ಲಕ್ಷ, ಗಂಭೀರವಾಗಿ ಗಾಯಗೊಂಡ ಐದು ವಿದ್ಯಾರ್ಥಿಗಳಿಗೆ ತಲಾ ₹20 ಲಕ್ಷ, ಇತರ ಗಾಯಾಳುಗಳಿಗೂ ಅಗತ್ಯ ನೆರವು ನೀಡಲಾಗುತ್ತದೆ.
ಈ ನೆರವನ್ನು ಬಿಜೆ ವೈದ್ಯಕೀಯ ಕಾಲೇಜಿನ ಜೂನಿಯರ್ ವೈದ್ಯರ ಸಂಘದ ಸಹಯೋಗದಿಂದ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬುಧಾಬಿಯಲ್ಲಿರುವ ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಸ್ಥಾಪಕರಾಗಿರುವ ಹಾಗೂ ವಿಪಿಎಸ್ ಹೆಲ್ತ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಶಂಶೀರ್, ಈ ಭೀಕರ ಘಟನೆ ತಮ್ಮನ್ನು ತೀವ್ರ ದುಃಖಕ್ಕೆ ಗುರಿಮಾಡಿದುದ್ದಾಗಿ ಹೇಳಿದ್ದಾರೆ. “ವಿದ್ಯಾರ್ಥಿಗಳ ಭವಿಷ್ಯ ಇಂತಹ ಘಟನೆಯಲ್ಲಿ ನಾಶವಾಗುವುದು ನೋವು ನೀಡುವ ವಿಷಯ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ನಮ್ಮಿಂದ ಸಾಧ್ಯವಾದಷ್ಟು ನೆರವು ನೀಡುವುದು ನಮ್ಮ ಮಾನವೀಯ ಕರ್ತವ್ಯ” ಎಂದು ಹೇಳಿದ್ದಾರೆ.
ಇದು ಮೊದಲ ಬಾರಿಗೆ ಶಂಶೀರ್ ಸಮಾಜಸೇವೆ ಮೆರೆದಿರುವುದು ಅಲ್ಲ. 2010ರ ಮಂಗಳೂರು ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದಾಗ ಕೂಡ ಅವರು ಹಲವು ಕುಟುಂಬಗಳಿಗೆ ಆರ್ಥಿಕ ನೆರವು ಹಾಗೂ ಉದ್ಯೋಗದ ಅವಕಾಶಗಳನ್ನು ಒದಗಿಸಿದ್ದರು.