ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದ ನಡುವೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸರಣಿ ಟ್ವೀಟ್ಗಳ ಮೂಲಕ ಸಮಾವೇಶವನ್ನು ತೀವ್ರವಾಗಿ ಟೀಕಿಸಿದ್ದಾರೆ.
“ಸಾಧನೆ 1”, “ಸಾಧನೆ 2”, “ಸಾಧನೆ 3” ಎಂದು ಹತ್ತಕ್ಕೂ ಹೆಚ್ಚು ವ್ಯಂಗ್ಯಮಯ ಟ್ವೀಟ್ ಮಾಡಿರುವ ಯದುವೀರ್, “ಇದು ಸಾಧನೆಯ ಸಮಾವೇಶವೋ ಅಥವಾ ಆರ್ಥಿಕ ಕುಸಿತದ ಆಚರಣೆಯೋ?”, “ಭರವಸೆಗಳನ್ನು ಈಡೇರಿಸದ ಸರಕಾರದ ಸ್ವಯಂ ಅಭಿನಂದನಾ ಕಾರ್ಯಕ್ರಮವೋ?” ಎಂದು ಪ್ರಶ್ನಿಸಿದ್ದಾರೆ.

ಅವರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಲ್ಲಿ– ರಾಜ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಾರ್ವಜನಿಕ ಸೇವೆಗಳ ಕುಸಿತ, ನೈಜ ಅಭಿವೃದ್ಧಿಯ ಕೊರತೆ ಮೊದಲಿವೆ. ರಾಜ್ಯದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ‘ತಾತ್ಕಾಲಿಕ ನೇಮಕಾತಿ’ಗಳ ಬಗ್ಗೆ ಮಾತ್ರ ಮಾತನಾಡುತ್ತಿರುವ ಸರ್ಕಾರ ಖಾಯಂ ನೇಮಕಕ್ಕೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಗಳ ಶೌಚಾಲಯಗಳ ಹದಗೆಟ್ಟಿರುವ ಸ್ಥಿತಿ, ಬಿರುಕು ಬಿಟ್ಟ ಗೋಡೆಗಳು, ಸೋರುವ ಛಾವಣಿಗಳ ಕುರಿತಂತೆ ಚಿಂತೆ ವ್ಯಕ್ತಪಡಿಸಿರುವ ಯದುವೀರ್, “ಬಡ ಮಕ್ಕಳಿಗೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ. ಶಿಕ್ಷಣವನ್ನು ನಿರ್ಲಕ್ಷಿಸಿದ ರಾಜ್ಯ ತನ್ನ ಭವಿಷ್ಯವನ್ನೇ ಹಾಳುಮಾಡುತ್ತದೆ,” ಎಂದು ಎಚ್ಚರಿಸಿದ್ದಾರೆ.
ಸಮಾವೇಶದಲ್ಲಿ ಮೆಚ್ಚುಗೆಗಳಿಗೆ ಮುಕ್ತಾಯವಿಲ್ಲದಿದ್ದರೂ, ಸಂಸದ ಯದುವೀರ್ ಈ ಟ್ವೀಟ್ಗಳ ಮೂಲಕ ಸರ್ಕಾರದ ಕಾರ್ಯಕ್ಷಮತೆಯನ್ನ ಪ್ರಶ್ನಿಸಿದ್ದಾರೆ.