ಬೆಂಗಳೂರು: ರಾಜ್ಯದಲ್ಲಿ ಕುರಿಗಾಯಿಗಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದಕ್ಕಾಗಿ ಕರಡು ಮಸೂದೆ ಸಿದ್ಧಪಡಿಸಲಾಗಿದೆ. ಈ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲಿದೆ. ಒಂದು ವೇಳೆ ಮಸೂದೆಗೆ ಅಂಗೀಕಾರ ದೊರೆತರೇ, ಇನ್ಮುಂದೆ ರಾಜ್ಯದಲ್ಲಿ ಕುರಿಗಾಯಿಗಳನ್ನು ನಿಂದಿಸಿದ್ರೇ ಜೈಲೆ ಶಿಕ್ಷೆ ಖಚಿತವಾಗಲಿದೆ.
ಸಾಂಪ್ರದಾಯಿಕ ಕುರಿಗಾಹಿಗಳ ಮೇಲಿನ ದೌರ್ಜನ್ಯ, ಶೋಷಣೆ, ಅವಹೇಳನ ತಡೆದು ಹಿತ ಕಾಪಾಡುವ ಜೊತೆಗೆ ಆ ವರ್ಗಕ್ಕೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಯೋಜನೆಗಳನ್ನು ಜಾರಿಗೊಳಿಸಲು ಕಾನೂನು ಜಾರಿಗೆ ರಾಜ್ಯ ಸರ್ಕಾರವು ಮುಂದಾಗಿದೆ.
ರಾಜ್ಯದ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಬದ್ದವಾಗಿದೆ. ಈಗಾಗಲೇ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆಯ ಕರಡು ಸಿದ್ದವಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ (ಆಗಸ್ಟ್ 19, 2025) ಒಪ್ಪಿಗೆ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಪಶುವೈದ್ಯಕೀಯ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಯ್ದೆಯ ಜಾರಿಗೆ ಬದ್ದತೆಯನ್ನು ವ್ಯಕ್ತಪಡಿಸಿದ್ದಾರೆ. ಕುರಿಗಾರರ ಸ್ವತ್ತುಗಳ ರಕ್ಷಣೆ, ಪರಿಹಾರ ಯೋಜನೆಗಳು, ವೈದ್ಯರ ನೇಮಕಾತಿ, ಪೊಲೀಸ್ ರಕ್ಷಣೆಗಾಗಿ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ 2025ರ ಕರಡನ್ನು ಸಿದ್ದಪಡಿಸಲಾಗಿದೆ. ಇದಕ್ಕೆ ಕಾನೂನು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕರಡು ವಿಧೇಯಕಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು. ಅನುಮತಿಯ ನಂತರ ಈ ಬಾರಿಯ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಚಿವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಅಪರಾಧಕ್ಕೆ ಏನು ಶಿಕ್ಷೆ?
- ಯಾವುದೇ ಸಾರ್ವಜನಿಕ ಆಸ್ತಿ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ (ಮೀಸಲು ಅರಣ್ಯ ಹೊರತುಪಡಿಸಿ) ಕುರಿಗಾಯಿಗೆ ಪ್ರವೇಶ ನಿರಾಕರಿಸಿದರೇ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಬಹುದಾಗಿದೆ.
- ಸಾರ್ವಜನಿಕ ರೆಸಾರ್ಟ್ ಸ್ಥಳ ಬಳಸುವುದನ್ನು ಅಥವಾ ಮೇಯಿಸುವ ಸಾಂಪ್ರದಾಯಿಕ ಹಕ್ಕು ನಿರಾಕರಿಸಿದರೇ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ
- ಸಾವು ಸಂಭವಿಸುವಂತೆ ದೈಹಿಕ ಗಾಯ ಉಂಟು ಮಾಡಿದರೇ ಅಥವಾ ಸಾವಿಗೆ ಕಾರಣವಾದರೇ ಸದ್ಯಕ್ಕೆ ಜಾರಿಯಲ್ಲಿರುವ ಸಂಬಂಧಿತ ಅಪರಾಧಿಕ ಕಾನೂನಿನಂತೆ ಶಿಕ್ಷೆ ವಿಧಿಸಬಹುದಾಗಿದೆ.
- ಲೈಂಗಿಕ ಕಿರುಕುಳ ನೀಡದಿರೂ ಸದ್ಯ ಜಾರಿಯಲ್ಲಿರುವಂತ ನಿಯಮದಡಿ ಶಿಕ್ಷೆ ಫಿಕ್ಸ್ ಆಗಿದೆ.
- ಕುರಿಗಾಯಿಯ ಚರ ಅಥವಾ ಇತರೆ ಆಸ್ತಿಗೆ ಹಾನಿ ಉಂಟು ಮಾಡಿದರೇ ಅಥವಾ ಕಸಿದುಕೊಂಡರೇ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಹಾನಿಗೊಳಗಾದ ಆಸ್ತಿಯ ಮೌಲ್ಯಕ್ಕೆ ಸಮಾನವಾದ ದಂಡ