ವರದಿ : ಕುಪ್ಪೆಮಹದೇವಸ್ವಾಮಿ
ಕೆ.ಆರ್.ನಗರ : ಸಮಾಜದಲ್ಲಿ ಸರ್ವರೂ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರ ಮನೆಗಳ ನಂದಾದೀಪ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಹರಂಬಳ್ಳಿ ಕೊಪ್ಪಲು ಗ್ರಾಮದಲ್ಲಿ 25 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬದುಕು ರೂಪಿಸಿಕೊಟ್ಟವರನ್ನು ಕೊನೆಯ ಉಸಿರು ಇರುವ ತನಕ ನೆನೆದು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನರು ಅಬುಭವಿಸಿದ ಸಂಕಷ್ಟವನ್ನು ಅರಿತು ದೇಶವಾಸಿಗಳು ಭವಿಷ್ಯದಲ್ಲಿ ಶಾಶ್ವತವಾಗಿ ನೆಮ್ಮದಿಯಿಂದ ಬದುಕಬೇಕು ಎಂಬ ಉದ್ದೇಶದಿಂದ ಜಗತ್ತನ್ನೇ ಸಂಚರಿಸಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಜಗತ್ತಿನ ಜ್ಣಾನ ಸೂರ್ಯ ಅಜರಾಮರ ಎಂದು ಬಣ್ಣಿಸಿದರು.
ತಮ್ಮ ಜೀವನದಲ್ಲಿ ಅನುಭವಿಸಿದ ನೋವನ್ನು ಭರತ ಖಂಡದ ಯಾರೊಬ್ಬರು ನೋಡಲೇ ಬಾರದು ಎಂಬ ಮುಂದಾಲೋಚನೆಯಿಂದ ಬಾಬಾ ಸಾಹೇಬರು ಶಾಶ್ವತ ಸಂವಿಧಾನವನ್ನು ರಚಿಸಿದ್ದು ಇದು ಜಗತ್ತಿಗೆ ಮಾದರಿ ಎಂದ ಶಾಸಕರು ಅಂತಹ ಮಹಾನ್ ಪುರುಷ ನಮ್ಮ ದೇಶದಲ್ಲಿ ಜನಿಸಿದ್ದು ಎಲ್ಲರ ವಿಶೇಷ ಎಂದು ಕೊಂಡಾಡಿದರು.
ನಿಗದಿತ ಅವಧಿಯೊಳಗೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳ್ಳಿಸಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಇರುವ ಎಲ್ಲಾ ಅಂಬೇಡ್ಕರ್ ಸಮುದಾಯ ಭವನಗಳು ಮತ್ತು ನಿರ್ಮಾಣವಾಗಲಿರುವ ಭವನಗಳಲ್ಲಿಯೂ ಡಿಜಿಟಲ್ ಗ್ರಂಥಾಲಯ ಮಾಡುವುದಾಗಿ ಘೋಷಿಸಿದರು.
ಇದಕ್ಕು ಮೊದಲು ಶಾಸಕರು ಗ್ರಾಮದಲ್ಲಿ ನಿರ್ಮಾಣ ವಾಗಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಶುಭಕೋರಿದರು.

ಮೈಮುಲ್ ನಿರ್ದೇಶಕಿ ಮಲ್ಲಿಕಾರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಯೋಗೇಶ್, ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಮಹದೇವಮ್ಮ, ಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಇ.ಆರ್. ಕವಿತ, ಉಪಾಧ್ಯಕ್ಷೆ ಮಂಜಮ್ಮ, ನಿರ್ದೇಶಕರಾದ ನಾಗರತ್ನ, ಗೌರಮ್ಮ, ಬಬಿತಾ, ಲಕ್ಷ್ಮಿ, ಆಶಾ, ಮಮತ, ಕೆ.ಶೋಭಾ, ಗೌರಮ್ಮ, ಸರಸಮ್ಮ, ಪ್ರೇಮ, ಕಾರ್ಯದರ್ಶಿ ಹೆಚ್.ಎಸ್.ವಿಜಯಲಕ್ಷ್ಮಿ, ಸಿಬ್ಬಂದಿ ಭಾಗ್ಯಮ್ಮ, ಮುಖಂಡರಾದ ನಂದೀಶ್, ಹೆಚ್.ವಿ.ಕಾಳಜಿ, ಚೆಲುವಯ್ಯ, ಸುರೇಶ್, ಹೆಚ್.ಎಸ್.ಸ್ವಾಮಿ, ವೆಂಕಟೇಶ್, ಬಸವರಾಜು, ಹೆಚ್.ಡಿ.ನಾಗೇಶ್, ನಾರಾಯಣ, ನಿರ್ಮಿತಿ ಕೇಂದ್ರ ಅಭಿಯಂತರ ಚೇತನ್, ಗುತ್ತಿಗೆದಾರ ದರ್ಶನ್, ಪಿಡಿಒ ಉಮೇಶ್, ಮೈಮುಲ್ ಸಹಾಯಕ ವ್ಯವಸ್ಥಾಪಕ ಡಾ.ಪ್ರವೀಣ್ ಪತ್ತಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.



