ರಾಮದುರ್ಗ : ಗ್ರಾಮ ಪಂಚಾಯತಿಗಳಲ್ಲಿ ಇಲ್ಲಿಯವರೆಗೆ ಜಾರಿಯಲ್ಲಿದ್ದ ಕೇಂದ್ರ ಸರಕಾರದ ಪ್ರಾಯೋಜಿತ ಮನರೇಗಾ ಯೋಜನೆಯನ್ನು ಮಾರ್ಪಾಡುಗೊಳಿಸಿ ವಿಬಿ-ಜಿ-ರಾಮ್ಜಿ ಯೋಜನೆಯಾಗಿ ಬದಲಾವಣೆ ಮಾಡಿ ವಿವಿಧ ಮಾರ್ಪಾಡುಗಳನ್ನು ಮಾಡಿದ್ದು, ಅವುಗಳ ಕುರಿತು ಜಾಗೃತಿ ಮೂಡಿಸಲು ಜ.29 ರಂದು ಗೊಡಚಿಯಿಂದ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಡಾ.ಕೆ.ವಿ.ಪಾಟೀಲ ತಿಳಿಸಿದರು.
ಈ ಕುರಿತು ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಯೋಜನೆಯಲ್ಲಿ ಡಿಜಟಲೀಕರಣದ ಮುಖಾಂತರ ನೇರವಾಗಿ ಕೂಲಿದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಮೊದಲು 100 ದಿನಗಳು ಇದ್ದ ಕೂಲಿ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರಕಾರ ಶೇ.60ರಷ್ಟು ಹಾಗೂ ಶೇ.40ರಷ್ಟು ಅನುದಾನ ಯೋಜನೆ ಮೀಸಲಿಡಬೇಕಿದೆ.
ಇನ್ನೂ ಕಾಂಗ್ರೆಸ್ ಪಕ್ಷ ಯೋಜನೆಯ ಕುರಿತು ಅಪಪ್ರಚಾರ ಮಾಡುತ್ತಿದ್ದು, ಮಾರ್ಪಾಡುಗಳು ಜನಪರ ವಾಗಿದ್ದರೂ ರಾಜಕೀಯ ಮಾಡುವುದು ಸರಿಯಲ್ಲ. ಅದರಲ್ಲಿರುವ ಉತ್ತಮ ಅಂಶಗಳನ್ನು ಜನತೆಗೆ ತಿಳಿಸುವ ಸಲುವಾಗಿ ಗೊಡಚಿಯಿಂದ ರಾಮದುರ್ಗ ವರೆಗೆ ಮಧ್ಯದಲ್ಲಿ ಬರುವ ಗ್ರಾಮ ಪಂಚಾಯತಿ ಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆ ರಾಮದುರ್ಗ ತಲುಪಿದ ನಂತರ ತುರನೂರ ಹತ್ತಿರ ಇರುವ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದ ಹತ್ತಿರ ಇರುವ ಬಿಜೆಪಿ ತಾಲೂಕು ಘಟಕದ ಕಾರ್ಯಾಲಯದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಾಜಿ ಪ್ರತಿನಿಧಿಗಳು, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ಬಿ.ಪಾಟೀಲ, ಬಿಜೆಪಿ ತಾಲೂಕು ಮಾಧ್ಯಮ ಪ್ರಮುಖ ಮಲ್ಲಿಕಾರ್ಜುನ ಭಾವಿಕಟ್ಟಿ, ಸಹ ಮಾಧ್ಯಮ ಪ್ರಮುಖ ಡಾ.ಬಿ.ಎನ್.ಮಾದನ್ನವರ, ಮಾಜಿ ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಬಿಜೆಪಿ ತಾಲೂಕು ಕಾರ್ಯದರ್ಶಿ ಈರನಗೌಡ ಹೊಸಗೌಡ್ರ, ವಿಠ್ಠಲ ಸೋಮ ಗೊಂಡ ಮತ್ತಿತರರಿದ್ದರು.



