ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದ್ದು, ದಿನಕ್ಕೊಂದು ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಸುಮಾರು 8 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸ್ಥಿರ-ಚರ ಆಸ್ತಿ ಹೊಂದಿದ್ದ ರಾಯ್, ಕಳೆದ ಆರು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
ಕುತೂಹಲಕಾರಿ ಸಂಗತಿಯೆಂದರೆ, ಇಷ್ಟು ಬೃಹತ್ ಪ್ರಮಾಣದ ಹೂಡಿಕೆಗೆ ರಾಯ್ ಅವರು ಯಾವುದೇ ಬ್ಯಾಂಕ್ಗಳಿಂದ ಸಾಲ ಪಡೆದಿರಲಿಲ್ಲ. ಬ್ಯಾಂಕ್ ಸಾಲವಿಲ್ಲದೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಈಗ ತನಿಖಾ ಸಂಸ್ಥೆಗಳನ್ನು ಕಾಡುತ್ತಿದೆ. ರಾಯ್ ಅವರ ಹೊಸ ಯೋಜನೆಗಳಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳು ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಈ ಹಣವು ಅಕ್ರಮ ಮೂಲಗಳಿಂದ (Black Money) ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ‘ಕಾನ್ಫಿಡೆಂಟ್’ ಸಂಸ್ಥೆಯ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖೆ (IT) ದಾಳಿಗಳು ನಡೆಯುತ್ತಿದ್ದವು. ಇದರಿಂದ ಗಾಬರಿಗೊಂಡ ಹೂಡಿಕೆದಾರರು, ತಮ್ಮ ಹೆಸರು ಎಲ್ಲಿ ಹೊರಬರುತ್ತದೋ ಎಂಬ ಆತಂಕದಲ್ಲಿ ಹಣವನ್ನು ವಾಪಸ್ ನೀಡುವಂತೆ ರಾಯ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಒಂದೆಡೆ ಐಟಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನಿರಂತರ ನಿಗಾ, ಮತ್ತೊಂದೆಡೆ ಹೂಡಿಕೆದಾರರ ಕಿರುಕುಳದಿಂದ ರಾಯ್ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು.
ಕರ್ನಾಟಕ, ಕೇರಳ ಮತ್ತು ದುಬೈನಲ್ಲಿ ಉದ್ಯಮ ವಿಸ್ತರಿಸಿದ್ದ ರಾಯ್, ಇತ್ತೀಚಿನ ಹೊಸ ಯೋಜನೆಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಕಾರಣ ಹಣಕಾಸು ನಿರ್ವಹಣೆಯಲ್ಲಿ ವಿಫಲರಾಗಿದ್ದರು. ಅವರ ವೈಭೋಗದ ಜೀವನಶೈಲಿಯೂ ಈ ಆರ್ಥಿಕ ಕುಸಿತಕ್ಕೆ ಒಂದು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಸಂಕೀರ್ಣ ಪರಿಸ್ಥಿತಿಗಳಿಂದ ಹೊರಬರಲಾರದೆ ಅವರು ಆತ್ಮಹತ್ಯೆಯ ಹಾದಿ ತುಳಿದಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪ್ರಸ್ತುತ ಎಸ್ಐಟಿ (SIT) ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಸತ್ಯಾಂಶ ಶೀಘ್ರದಲ್ಲೇ ಹೊರಬರಬೇಕಿದೆ.



