ಮೈಸೂರು: ವಿದ್ಯಾಸ್ಪಂದನ ಸಂಸ್ಥೆಯಿಂದ ಮೈಸೂರಿನ ಕೊಪ್ಪಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ವಿದ್ಯಾಸ್ಪಂದನ ಸಂಸ್ಥೆಯಿಂದ ಕಳೆದು ಹತ್ತು ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ. ಇಂದು ಮೈಸೂರಿನ ಕೊಪ್ಪಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಕಿಟ್ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಕ್ಕಳಿಗೆ ಭಾರತ ಭಾರತೀ ಪ್ರಕಾಶನದ ಭಾರತದ ಮಹಾಪುರುಷರ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಪ್ಪಲೂರು ಗ್ರಾಮದ ಮಹಿಳ ಮುಖಂಡರು ಹಾಗೂ ಸಮಾಜ ಸೇವಕರಾದ ಕಮಲ ನಟರಾಜ್, ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಓದಬೇಕು, ಹೆಣ್ಣು ಮಕ್ಕಳು ಹೆಚ್ಚು ಇರುವ ಶಾಲೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿ ಹೆಚ್ಚು ಹೆಸರು ತರಬೇಕು, ಈಗಾಗಲೇ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಪುಸ್ತಕಗಳನ್ನು ವಿತರಿಸಿ ಮಾತನಾಡಿದ ವಿದ್ಯಾಸ್ಪಂದನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪುನೀತ್ ಜಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದು ತಾವೆಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು, ಸರ್ಕಾರ ಈಗಾಗಲೇ ತಮಗೆ ಸಮವಸ್ತ್ರ, ಪಠ್ಯ ಪುಸ್ತಕ, ಶೂ ಗಳನ್ನು ನೀಡುತ್ತಿದೆ, ಅದರ ಜೊತೆಗೆ ಬಿಸಿ ಊಟವನ್ನು ಸಹ ನೀಡುತ್ತಿದೆ, ಸರ್ಕಾರ ತಾವೆಲ್ಲ ವಿದ್ಯಾವಂತರಾಗಿ ಭವಿಷ್ಯ ಭಾರತದ ಆಸ್ತಿಯಾಗಿ ತಮ್ಮನ್ನು ಮಾಡಲು ಪ್ರಯತ್ನಿಸುತ್ತಿದೆ. ತಾವೆಲ್ಲರೂ ಅದರ ಜವಾಬ್ದಾರಿ ಅರಿತು ಓದಬೇಕು ಎಂದರು.
ಓದಿನ ಜೊತೆಗೆ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾರತವನ್ನು ಹಾಗೂ ಕನ್ನಡ ಭಾಷೆಯನ್ನು ಗೌರವಿಸಬೇಕು. ಭಾರತದ ಸೈನಿಕರು, ರೈತರು, ಪೋಷಕರು ಹಾಗೂ ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಬೇಕು. ಅತ್ಯಂತ ಶಿಸ್ತಿನಿಂದ ಜೀವನದಲ್ಲಿ ಇರಬೇಕು, ಶಾಲೆಗೆ ತಪ್ಪದೆ ಪ್ರತಿನಿತ್ಯ ಹಾಜರಾಗಿ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಮನೆಯಲ್ಲಿ ಅಭ್ಯಾಸ ಮಾಡಬೇಕು, ಸ್ವಚ್ಛ ಭಾರತದ ಜವಾಬ್ದಾರಿ ಮಕ್ಕಳಿಗೆ ಹೆಚ್ಚು ಬರಬೇಕು ಕಸಗಳನ್ನು ಬೀದಿ ಬದಿ ಹಾಕದೆ ಕಸದ ಗಾಡಿಗೆ ಹಾಕಬೇಕು ಎಂದು ನಿಮ್ಮ ಪೋಷಕರಿಗೆ ಹೇಳಬೇಕು. ಕುರ್ ಕುರೆ, ಲೇಸ್, ಇನ್ನಿತರ ಪ್ಯಾಕಡ್ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು ತರಕಾರಿ, ಹಣ್ಣು ಸೇರಿದಂತೆ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಕಮಲಾ ನಟರಾಜ್, ಅಕುನಾ ಟೆಕ್ನಾಲಜಿಯ ಪೂಜಾ ಎನ್, ಉದ್ಯಮಿ ಸುಧಾ, ಗಣೇಶ್, ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.