ಶ್ರೀಶೈಲಂ : ಭ್ರಮರಾಂಬ ದೇವಿಗೆ ಭಕ್ತರೊಬ್ಬರು ವಿಶಿಷ್ಟವಾದ ರೇಷ್ಮೆ ಸೀರೆಯನ್ನು ಅರ್ಪಿಸಿದ್ದು, ಈ ಅಪರೂಪದ ಕಾಣಿಕೆ ಭಕ್ತರ ಗಮನ ಸೆಳೆದಿದೆ. ತೆಲಂಗಾಣದ ಸರ್ಸಿಲ್ಲಾ ಜಿಲ್ಲೆಯ ನೇಕಾರ ವಿಜಯ್ ಕುಮಾರ್ ಅವರು ತಾವು ನೇಯ್ದ ವಿಶೇಷ ರೇಷ್ಮೆ ಸೀರೆಯನ್ನು ಬೆಂಕಿ ಪೊಟ್ಟಣದಲ್ಲಿ ಇಟ್ಟುಕೊಂಡು ಶ್ರೀಶೈಲ ದೇಗುಲಕ್ಕೆ ಆಗಮಿಸಿ ಅರ್ಪಿಸಿದ್ದಾರೆ.
ದೇಗುಲದ ಟ್ರಸ್ಟ್ ಅಧ್ಯಕ್ಷ ಪೊತಗುಂಟ ರಮೇಶ್ ನಾಯ್ಡು ಅವರಿಗೆ ಸೀರೆಯನ್ನು ಹಸ್ತಾಂತರಿಸಿ, ಅದರ ವಿಶೇಷ ವಿನ್ಯಾಸದ ಕುರಿತು ವಿವರಿಸಿದ್ದಾರೆ. ವಿಜಯ್ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಸೇರಿ ಒಂದು ವಾರದಲ್ಲಿ ಈ ವಿಶೇಷ ಸೀರೆಯನ್ನು ನೇಯ್ದಿದ್ದಾರೆ. 5.5 ಮೀಟರ್ ಉದ್ದ ಹಾಗೂ 48 ಇಂಚು ಅಗಲದ ಈ ಸೀರೆ ಕೇವಲ 200 ಗ್ರಾಂ ತೂಕ ಹೊಂದಿದೆ.
ಸಾಂಪ್ರದಾಯಿಕ ‘ಇಕ್ಕತ್’ ವಿನ್ಯಾಸದಲ್ಲಿ ತಯಾರಿಸಿರುವ ಈ ಸೀರೆಯನ್ನು ಮಡಚಿದಾಗ ಸಣ್ಣ ಬೆಂಕಿ ಪೊಟ್ಟಣದಲ್ಲೂ ಇರಿಸಬಹುದಾಗಿದೆ. ದೇವಿಯ ಆಶೀರ್ವಾದದಿಂದಲೇ ಈ ವಿಶಿಷ್ಟ ಸೀರೆ ತಯಾರಾಗಿದೆ ಎಂದು ವಿಜಯ್ ತಿಳಿಸಿದ್ದಾರೆ.
ವಿಜಯ್ ಕುಮಾರ್ ಅವರ ಕೈಚಳಕವನ್ನು ಶ್ಲಾಘಿಸಿದ ದೇಗುಲ ಟ್ರಸ್ಟ್ ಅಧ್ಯಕ್ಷರು, ಈ ಸೀರೆ ಕೈಮಗ್ಗ ನೇಕಾರರ ಸೃಜನಶೀಲತೆ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಸೀರೆ ಅರ್ಪಿಸಿದ ವಿಜಯ್ ಅವರ ಕುಟುಂಬಕ್ಕೆ ದೇವಾಲಯದ ವತಿಯಿಂದ ವಿಶೇಷ ದರ್ಶನದ ಅವಕಾಶ ಕಲ್ಪಿಸಿದ್ದಾರೆ.



