ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೇಲೆ ತೀವ್ರ ನಿಗಾವಹಿಸಲು ಕಾರಾಗೃಹ ಇಲಾಖೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿದೆ.
ಈ ಹಿಂದೆ ಎಐ ಕ್ಯಾಮರಾ ಬಳಕೆ ಮಾಡಿ ಕೈದಿಗಳ ಮೇಲೆ ನಿಗಾವಹಿಸಿತ್ತು. ಈ ಮೂಲಕ ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ವ್ಯವಸ್ಥೆ ಹಾಗೂ ಡಿಜಿಟಲ್ ಟ್ರ್ಯಾಕಿಂಗ್ನ್ನು ಜಾರಿಗೊಳಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಜೈಲಿನಲ್ಲಿ ನಡೆಯುವ ಅಕ್ರಮ ತಡೆಯಲು ಬಯೋಮೆಟ್ರಿಕ್ ಅಳವಡಿಕೆ ಮಾಡಿದೆ.
ಇತ್ತೀಚಿಗೆ ಜೈಲಿಗೆ ಎಸ್ಪಿ ಅನ್ಶು ಕುಮಾರ್ ಮತ್ತು ಡಿಜಿಪಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಹಲವು ಬದಲಾವಣೆ ಜಾರಿಗೊಳಿಸಿದ್ದಾರೆ.
2.25 ಕೋಟಿ ರೂ. ಹಣ ಖರ್ಚು ಮಾಡಿ ಕಾರಾಗೃಹ ಇಲಾಖೆ ಬಯೋಮೆಟ್ರಿಕ್ ಅಳವಡಿಸಿದ್ದಯ, ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕಾರ್ಖಾನೆಗಳು ಸೇರಿದಂತೆ ಬೇಕರಿ ಪ್ರದೇಶ ಸೇರಿ ಎಲ್ಲೆಡೆ ಬಯೋಮೆಟ್ರಿಕ್ ಹಾಕಿಸಿದೆ.
ಕೈದಿಗಳು ಮೊಬೈಲ್ ಫೋನ್, ನಿಷೇಧಿತ ವಸ್ತುಗಳ ಬಳಕೆಗೆ ಬ್ರೇಕ್ ಹಾಕಲಾಗಿದ್ದು, ಈ ಮೂಲಕ ಮತ್ತೆ ಜೈಲಿನಲ್ಲಿ ಬೃಹತ್ ಬದಲಾವಣೆಯಾಗುವ ಸಾಧ್ಯತೆಯಿದೆ.



