ಬೆಂಗಳೂರು : ನಗರದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿರುವ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ತನ್ನದೇ ಕೇಂದ್ರ ಕಚೇರಿ ಆವರಣದಲ್ಲಿರುವ ಹಳೆಯ ಹಾಗೂ ಅನಾಥ ವಾಹನಗಳನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಬಿಎ ಕೇಂದ್ರ ಕಚೇರಿ ಆವರಣ ಹಾಗೂ ಕೌನ್ಸಿಲ್ ಕಟ್ಟಡದ ಹಿಂಭಾಗದಲ್ಲಿ ನಗರಪಾಲಿಕೆಗೆ ಸೇರಿದ ಹಳೆಯ ವಾಹನಗಳು ಮತ್ತು ಅನಾಥ ವಾಹನಗಳು ಹಲವು ವರ್ಷಗಳಿಂದ ತುಕ್ಕು ಹಿಡಿದು ನಿಂತಿದ್ದು, ಗುಜರಿ ವಾಹನಗಳ ತಾಣದಂತೆಯೇ ಕಾಣಿಸುತ್ತಿವೆ. ನಿರ್ವಹಣೆಯಿಲ್ಲದೆ ಬಿದ್ದಿರುವ ಈ ವಾಹನಗಳು ಕಚೇರಿಯ ಅಂದವನ್ನು ಹಾಳು ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಉಂಟುಮಾಡುತ್ತಿವೆ.
ಈ ವಾಹನಗಳಿಂದ ಜಿಬಿಎ ಕೇಂದ್ರ ಕಚೇರಿಗೆ ಬರುವ ನಾಗರಿಕರಿಗೆ ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ವಾಹನಗಳನ್ನು ತೆರವುಗೊಳಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೆಡೆ ನಗರದಾದ್ಯಂತ ಅನಾಥ ವಾಹನಗಳು ಹಾಗೂ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಜಿಬಿಎ, ಮತ್ತೊಂದೆಡೆ ತನ್ನದೇ ಆವರಣದಲ್ಲಿರುವ ತುಕ್ಕು ಹಿಡಿದ ವಾಹನಗಳನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದು, ಮೊದಲು ಜಿಬಿಎ ತನ್ನ ಕೇಂದ್ರ ಕಚೇರಿ ಆವರಣವನ್ನು ಸ್ವಚ್ಛಗೊಳಿಸಬೇಕು. ನಂತರ ನಗರದ ಫುಟ್ಪಾತ್ ಒತ್ತುವರಿ ತೆರವಿನ ಬಗ್ಗೆ ಮಾತನಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



