Wednesday, June 17, 2026
Google search engine

Homeರಾಜ್ಯಗೃಹಲಕ್ಷ್ಮಿ ಹೊಸ ಅರ್ಜಿಗೆ 4 ಪ್ರಶ್ನೆಗಳ ಸೇರ್ಪಡೆ: ಸರ್ಕಾರಿ ನೌಕರರ ಕುಟುಂಬಗಳಿಗೆ ಸಂಕಷ್ಟ?

ಗೃಹಲಕ್ಷ್ಮಿ ಹೊಸ ಅರ್ಜಿಗೆ 4 ಪ್ರಶ್ನೆಗಳ ಸೇರ್ಪಡೆ: ಸರ್ಕಾರಿ ನೌಕರರ ಕುಟುಂಬಗಳಿಗೆ ಸಂಕಷ್ಟ?

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ನಮೂನೆ ಸಿದ್ಧವಾಗಿದ್ದು, ಅದರಲ್ಲಿ ನಾಲ್ಕು ಹೊಸ ಪ್ರಶ್ನೆಗಳನ್ನು ಸೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಬೆಳವಣಿಗೆಯಿಂದ ಸರ್ಕಾರಿ ನೌಕರರ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ಮುಖ್ಯಮಂತ್ರಿ ಅವರ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ರೂಪಿಸುತ್ತಿದೆ. ಹೊಸ ಅರ್ಜಿಯಡಿ ಫಲಾನುಭವಿಗಳು ಬಯೋಮೆಟ್ರಿಕ್ ಪರಿಶೀಲನೆಯ ಜೊತೆಗೆ ಒಟ್ಟು 12 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಹಿಂದೆ ಅರ್ಜಿಯಲ್ಲಿ ಕೇವಲ ಆರು ಪ್ರಶ್ನೆಗಳಷ್ಟೇ ಇದ್ದವು. ಇದೀಗ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಉದ್ದೇಶದಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಇಲಾಖೆ ಮುಂದಾಗಿದೆ.

ಹೊಸದಾಗಿ ಸೇರಿಸಲಾದ ಪ್ರಶ್ನೆಗಳಲ್ಲಿ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರೆಯೇ ಎಂಬ ಪ್ರಶ್ನೆ ಪ್ರಮುಖವಾಗಿದೆ. ಇದರಿಂದ ಸರ್ಕಾರಿ ನೌಕರರ ಕುಟುಂಬಗಳು ಯೋಜನೆಗೆ ಅರ್ಹವಾಗುತ್ತವೆಯೇ ಅಥವಾ ಇಲ್ಲವೇ ಎಂಬ ಅನುಮಾನ ಮೂಡಿದೆ. ಸರ್ಕಾರ ಈ ಪ್ರಶ್ನೆಯ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಅದರ ಜೊತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ, ಮತದಾರರ ಗುರುತಿನ ಚೀಟಿ ಇದೆಯೇ ಹಾಗೂ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಜೋಡಣೆ ಆಗಿದೆಯೇ ಎಂಬ ಪ್ರಶ್ನೆಗಳನ್ನೂ ಅರ್ಜಿಯಲ್ಲಿ ಸೇರಿಸಲಾಗಿದೆ. ಸರ್ಕಾರ ಯೋಜನೆಯ ಸೌಲಭ್ಯವನ್ನು ನಿಜವಾದ ಅರ್ಹ ಮಹಿಳೆಯರಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

ಈ ಹಿಂದೆ ಅರ್ಜಿಯಲ್ಲಿ ಮನೆಯ ಯಜಮಾನಿಯ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ, ಜಾತಿ, ಮೊಬೈಲ್ ಸಂಖ್ಯೆ ಹಾಗೂ ಐಟಿ ಅಥವಾ ಜಿಎಸ್‌ಟಿ ಪಾವತಿದಾರರೇ ಎಂಬ ಮಾಹಿತಿಯನ್ನು ಕೇಳಲಾಗುತ್ತಿತ್ತು.

ಹೊಸ ಅರ್ಜಿ ಜಾರಿಗೆ ಬಂದ ಬಳಿಕ ಯಾವ ಮಾನದಂಡಗಳ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸರ್ಕಾರಿ ನೌಕರರ ಕುಟುಂಬಗಳ ಬಗ್ಗೆ ಸರ್ಕಾರ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬೀಳಬೇಕಿದೆ.

RELATED ARTICLES
- Advertisment -
Google search engine

Most Popular