ನವದೆಹಲಿ : ಕರಾಚಿ ಉಗ್ರರ ದಾಳಿಯಲ್ಲಿ ‘ಭಾರತೀಯ ಏಜೆಂಟ್’ ಭಾಗಿಯಾಗಿದ್ದಾನೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತವು ಆಧಾರರಹಿತ ಎಂದು ತಳ್ಳಿಹಾಕಿದೆ. ಇದರೊಂದಿಗೆ, ತನ್ನ ದೇಶದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಜಾಲವನ್ನು ಮಟ್ಟಹಾಕುವತ್ತ ಗಮನ ಹರಿಸುವಂತೆ ಪಾಕಿಸ್ತಾನಕ್ಕೆ ಬುದ್ಧಿವಾದ ಹೇಳಿದೆ. ಇತರರತ್ತ ಬೆರಳು ತೋರಿಸುವ ಬದಲು ಪಾಕಿಸ್ತಾನವು ತನ್ನೊಳಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ಪಾಕಿಸ್ತಾನ್ ರೇಂಜರ್ಸ್ (ಸಿಂಧ್) ನ ಗುಲಿಸ್ತಾನ್-ಎ-ಜೌಹರ್ ಕ್ಯಾಂಪ್ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ದಾಳಿ ನಡೆಸಿದ ಮೂವರು ಸಶಸ್ತ್ರ ಉಗ್ರರು ಸಹ ಹತರಾಗಿದ್ದು, ಗಾಯಗೊಂಡ ಒಬ್ಬ ಉಗ್ರನನ್ನು ಬಂಧಿಸಲಾಗಿದೆ. ಈ ದಾಳಿಯಲ್ಲಿ ‘ಭಾರತೀಯ ಏಜೆಂಟ್’ ಶಾಮೀಲಾಗಿದ್ದಾನೆ ಎಂದು ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ದಾವೆ ಹೂಡಿದ್ದಾರಾದರೂ, ತಮ್ಮ ಆರೋಪಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.
ಪಾಕ್ ಆರೋಪಗಳನ್ನು ತಳ್ಳಿಹಾಕಿದ ಭಾರತ
ಭಾರತದ ವಿದೇಶಾಂಗ ಸಚಿವಾಲಯವು ಈ ದಾವೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನದ ಆರೋಪಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, “ಕರಾಚಿಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪಾಕಿಸ್ತಾನ ಮಾಡಿರುವ ಆರೋಪಗಳ ವರದಿಗಳನ್ನು ನಾವು ನೋಡಿದ್ದೇವೆ. ನಾವು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತೇವೆ” ಎಂದು ಹೇಳಿದ್ದಾರೆ.
ತನ್ನೊಳಗೆ ಇಣುಕಿ ನೋಡಲಿ ಪಾಕಿಸ್ತಾನ
“ಇತರರತ್ತ ಬೆರಳು ತೋರಿಸುವ ಬದಲು ಪಾಕಿಸ್ತಾನವು ತನ್ನೊಳಗೆ ಇಣುಕಿ ನೋಡಬೇಕು. ತನ್ನ ನೆಲದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ದೃಢ ಹಾಗೂ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು. ಹಾಗೆಯೇ ಭಯೋತ್ಪಾದನೆಯನ್ನು ಸರ್ಕಾರದ ನೀತಿಯನ್ನಾಗಿ ಬಳಸಿಕೊಳ್ಳುವ ತನ್ನ ಚಾಳಿಯನ್ನು ಬಿಡಬೇಕು” ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ISPR) ಭಾನುವಾರ (ಜೂನ್ 28) ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ದಾಳಿಯನ್ನು ‘ಜಮಾತ್-ಉಲ್-ಅಹ್ರಾರ್’ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದಾರೆ ಎಂದು ಹೇಳಿದೆ. ISPR ಪ್ರಕಾರ, ಸಶಸ್ತ್ರ ಉಗ್ರರು ಮೊದಲು ಕ್ಯಾಂಪ್ನ ಮುಖ್ಯ ದ್ವಾರದ ಬಳಿ ಸ್ಫೋಟ ನಡೆಸಿ, ನಂತರ ಕ್ಯಾಂಪಸ್ ಒಳಗೆ ನುಗ್ಗಲು ಯತ್ನಿಸಿದರು. ಆದರೆ, ರೇಂಜರ್ಸ್ ಸಿಬ್ಬಂದಿ ತಕ್ಷಣವೇ ಪ್ರತಿದಾಳಿ ನಡೆಸಿ ಅವರ ಸಂಚನ್ನು ವಿಫಲಗೊಳಿಸಿದರು. ಜಮಾತ್-ಉಲ್-ಅಹ್ರಾರ್, ನಿಷೇಧಿತ ಸಂಘಟನೆಯಾದ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ನಿಂದ ಬೇರ್ಪಟ್ಟ ಒಂದು ಗುಂಪಾಗಿದೆ. (ಏಜೆನ್ಸಿಸ್)



