ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಲ್ಲಿ ದೇಶದ 70 ಕೋಟಿ ಬಡವರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರ ತಿಳಿಸಿದ್ದಾರೆ. ವಸತಿ, ವಿದ್ಯುತ್, ಶೌಚಾಲಯ, ಕುಡಿಯುವ ನೀರು, ಅಡುಗೆ ಅನಿಲ, ಆಹಾರ ಭದ್ರತೆ ಮತ್ತು ಆರೋಗ್ಯ ಸೇವೆಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಅತ್ಯಂತ ವ್ಯಾಪಕವಾದ ಬಡತನ ನಿರ್ಮೂಲನಾ ಅಭಿಯಾನವನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಗಾಂಧಿನಗರದಲ್ಲಿ ‘ಪಿಎಂ ಫ್ಯಾಮಿಲಿ ಕೇರ್ ಟ್ರ್ಯಾಕರ್’ (PM-FCT) ಪೈಲಟ್ ಯೋಜನೆ ಮತ್ತು ‘ಹೆಲ್ತ್ ಪಾಸ್ಪೋರ್ಟ್’ಗೆ ಚಾಲನೆ ನೀಡಿದ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 2014ರಿಂದಲೂ ಸರ್ಕಾರದ ಪ್ರಮುಖ ಗುರಿ ಬಡವರ ಜೀವನ ಮಟ್ಟವನ್ನು ಸುಧಾರಿಸುವುದೇ ಆಗಿದೆ ಎಂದು ಅವರು ಪ್ರತಿಪಾದಿಸಿದರು.
ಪೂರ್ವಾಂಚಲದ ಬಡತನದ ನೆನಪುಗಳು
2014 ಕ್ಕಿಂತ ಮೊದಲು ತಾವು ಪೂರ್ವ ಉತ್ತರ ಪ್ರದೇಶಕ್ಕೆ (ಪೂರ್ವಾಂಚಲ) ಭೇಟಿ ನೀಡಿದ್ದ ದಿನಗಳನ್ನು ನೆನಪಿಸಿಕೊಂಡ ಅಮಿತ್ ಶಾ, ಅಲ್ಲಿನ ತೀವ್ರ ಬಡತನವನ್ನು ತಾವು ಹತ್ತಿರದಿಂದ ನೋಡಿರುವುದಾಗಿ ಹೇಳಿದರು. “ಗುಜರಾತ್ನಲ್ಲಿ ಬಡತನ ಇರಲಿಲ್ಲ ಎಂದಲ್ಲ, ಆದರೆ ನಾನು ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶಕ್ಕೆ ಹೋದಾಗ ನನಗೆ ನಿಜವಾದ ಬಡತನದ ಅರಿವಾಯಿತು. ಜನರಿಗೆ ವಾಸಿಸಲು ಮನೆಗಳಿರಲಿಲ್ಲ, ವಿದ್ಯುತ್ ಇರಲಿಲ್ಲ, ಅಸಂಖ್ಯಾತ ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಗುಡಿಸಲುಗಳಿದ್ದರೂ ಅಲ್ಲಿ ನೀರೊದಗಿಸುವ ಸೌಲಭ್ಯವಿರಲಿಲ್ಲ” ಎಂದು ಅವರು ನೆನೆದರು.
ಅಲ್ಲದೆ, ಆ ಸಮಯದಲ್ಲಿ ಮಹಿಳೆಯರು ಸಾಂಪ್ರದಾಯಿಕ ಒಲೆಗಳ ಮುಂದೆ ಗಂಟೆಗಟ್ಟಲೆ ಧೂಮದ ಮಧ್ಯೆ ಅಡುಗೆ ಮಾಡಬೇಕಾಗಿತ್ತು ಮತ್ತು ಬಡ ಕುಟುಂಬಗಳಿಗೆ ಆರೋಗ್ಯ ಸೇವೆಗಳು ಲಭ್ಯವಿರಲಿಲ್ಲ. ಕಾಯಿಲೆ ಬಂದರೆ ದೇವರನ್ನು ಪ್ರಾರ್ಥಿಸುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ ಎಂದು ಅವರು ಅಂದಿನ ಪರಿಸ್ಥಿತಿಯನ್ನು ವಿವರಿಸಿದರು.
12 ವರ್ಷಗಳ ಸಾಧನೆಗಳು
ಕೇಂದ್ರ ಸರ್ಕಾರವು ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಈ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಗೃಹ ಸಚಿವರು ತಿಳಿಸಿದರು. ಈಗಾಗಲೇ 3 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಮತ್ತೊಂದು ಕೋಟಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿದ್ಯುತ್ ಸಂಪರ್ಕ, ನಳದ ಮೂಲಕ ನೀರು, ಶೌಚಾಲಯ ಮತ್ತು ಗ್ಯಾಸ್ ಸಿಲಿಂಡರ್ ವಿತರಣೆ. ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಆಹಾರ ಧಾನ್ಯ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ. ತಮ್ಮ ಐದು ತಲೆಮಾರುಗಳಲ್ಲಿ ಇದೇ ಮೊದಲ ಬಾರಿಗೆ ಗ್ಯಾಸ್, ಶೌಚಾಲಯ, ಕುಡಿಯುವ ನೀರು ಮತ್ತು ವಿದ್ಯುತ್ ಇರುವ ಇಂತಹ ಸುಸಜ್ಜಿತ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಹಲವು ಫಲಾನುಭವಿಗಳು ತಮಗೆ ತಿಳಿಸಿದ್ದಾಗಿ ಶಾ ಹೆಮ್ಮೆಯಿಂದ ಹಂಚಿಕೊಂಡರು.
ಪಿಎಂ ಫ್ಯಾಮಿಲಿ ಕೇರ್ ಟ್ರ್ಯಾಕರ್
ಇದೇ ವೇಳೆ ಮಾತನಾಡಿದ ಗೃಹ ಸಚಿವರು, ಕಲ್ಯಾಣ ಯೋಜನೆಗಳ ಮುಂದಿನ ಹಂತಕ್ಕೆ ‘ಪಿಎಂ ಫ್ಯಾಮಿಲಿ ಕೇರ್ ಟ್ರ್ಯಾಕರ್’ ಅತ್ಯಂತ ಪ್ರಮುಖ ಮಾಧ್ಯಮವಾಗಿದೆ ಎಂದರು. ಈ ಹೊಸ ಸಂಯೋಜಿತ ವ್ಯವಸ್ಥೆಯ (Integrated System) ಮೂಲಕ ಬಡ ಕುಟುಂಬಗಳ ಮಕ್ಕಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ, ಪೌಷ್ಠಿಕಾಂಶ ಮತ್ತು ಶಿಕ್ಷಣ ಸಿಗುತ್ತಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.



