ಮೈಸೂರು : ಈ ಬಾರಿ ಮುಂಗಾರು ಮಳೆ ಕೈಗೊಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು ಬರಿದಾಗುತ್ತಿವೆ. ಅಂತೆಯೇ ರಾಜ್ಯದಲ್ಲಿಯೇ ಮೊದಲು ತುಂಬುವ ಕಬಿನಿ ಜಲಾಶಯದ ನೀರಿನ ಮಟ್ಟವೂ ಸಹ ಭಾರಿ ಕುಸಿತ ಕಂಡಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಜಲಾಶಯದ ಒಟ್ಟು ಎತ್ತರ 84 ಅಡಿಗಳಿದ್ದರೇ ನೀರಿನ ಮಟ್ಟ ಕೇವಲ 53 ಅಡಿಗೆ ಕುಸಿದಿದೆ. ಕಳೆದ ವರ್ಷ ಈ ದಿನಕ್ಕೆ 79 ಅಡಿ ನೀರಿದ್ದು ಭರ್ತಿಗೆ ಕೇವಲ 5 ಅಡಿ ಮಾತ್ರ ಉಳಿದಿತ್ತು.
ಜಲಾಶಯದ ನೀರಿನ ಒಳಹರಿವು ಕೂಡ ಕ್ಷೀಣಿಸುತ್ತಿದ್ದು ಜಲಾಶಯಕ್ಕೆ ಕೇವಲ 600 ಕ್ಯೂಸೆಕ್ಸ್ ನೀರು ಮಾತ್ರ ಒಳಹರಿವು ಇದ್ದರೇ ಜಲಾಶಯದಿಂದ ನದಿಗೆ 500 ಕ್ಯೂಸೆಕ್ಸ್ ಬಿಡಲಾಗುತ್ತಿದೆ ಕಳೆದ ವರ್ಷ ಇದೇ ದಿನಕ್ಕೆ 3845 ಕ್ಯೂಸೆಕ್ಸ್ ಒಳಹರಿವಿತ್ತು. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಸರಿಯಾಗಿ ಆಗದಿದ್ದರೆ ಕೃಷಿಗಿರಲಿ ಕುಡಿಯುವ ನೀರಿಗೂ ಅಭಾವ ಉಂಟಾಗುವ ಸಾಧ್ಯತೆ ಇದೆ.



