Monday, July 6, 2026
Google search engine

Homeರಾಜ್ಯ"ನಾನು ಗೃಹಸಚಿವನಾಗಿರುವವರೆಗೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ": ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

“ನಾನು ಗೃಹಸಚಿವನಾಗಿರುವವರೆಗೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ”: ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಕಲಬುರಗಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಡುವಿನ ಸಂಘರ್ಷ ತಾರಕಕ್ಕೇರಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಪಥಸಂಚಲನದ ವಿಚಾರದಲ್ಲಿ ಕಠಿಣ ನಿಲುವು ಪ್ರದರ್ಶಿಸಿದ್ದು, ರಾಜ್ಯದಲ್ಲಿ ಪಥಸಂಚಲನ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನಾನು ಗೃಹಸಚಿವನಾಗಿ ಇರುವವರೆಗೆ ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಪಡೆಯುವುದು ಕಡ್ಡಾಯ. ಈ ಸಂಬಂಧ ನಾನು ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ,” ಎಂದು ತಿಳಿಸಿದರು.

ದಾಖಲೆಗಳ ಬಗ್ಗೆ ಪ್ರಶ್ನೆ

“100 ವರ್ಷಗಳ ಇತಿಹಾಸವಿರುವ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್, ತನ್ನ ದಾಖಲೆಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಪಥಸಂಚಲನ ನಡೆಸಬೇಕಾದರೆ ನಿಯಮದಂತೆ ಅನುಮತಿ ಪಡೆಯಲೇಬೇಕು. ದಾಖಲೆಗಳು ಎಲ್ಲೋ ಇರಬಹುದು, ಅವುಗಳನ್ನು ಹುಡುಕಿಕೊಂಡು ಬರಲಿ. ಅಲ್ಲಿಯವರೆಗೆ ಸರ್ಕಾರ ಸುಮ್ಮನಿರುವುದಿಲ್ಲ,” ಎಂದು ಸವಾಲು ಹಾಕಿದರು.

ವೈಯಕ್ತಿಕ ಟೀಕೆಗಳಿಗೆ ತಿರುಗೇಟು

ಇದೇ ವೇಳೆ ತಮ್ಮ ವಿರುದ್ಧ ನಡೆಯುತ್ತಿರುವ ವೈಯುಕ್ತಿಕ ದಾಳಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರು ನನ್ನ ವೈಯಕ್ತಿಕ ಜೀವನದ ಬಗ್ಗೆ, ಮದುವೆ, ಮಕ್ಕಳು ಹಾಗೂ ನನ್ನ ಮೈಬಣ್ಣದ ಬಗ್ಗೆ ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರು ಎಷ್ಟೇ ಕೆದಕಿದರೂ ನಾನು ಹೆದರುವ ವ್ಯಕ್ತಿಯಲ್ಲ. ನನ್ನ ಬಣ್ಣದ ಬಗ್ಗೆ ಮಾತನಾಡುವವರಿಗೆ ನಾನು ಮಾಡುತ್ತಿರುವ ಕೆಲಸಗಳೇ ಉತ್ತರ ನೀಡುತ್ತವೆ,” ಎಂದು ತಿರುಗೇಟು ನೀಡಿದರು.

ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಆರ್‌ಎಸ್‌ಎಸ್ ಮತ್ತು ಸರ್ಕಾರದ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES
- Advertisment -
Google search engine

Most Popular