ನವದೆಹಲಿ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಕೇಂದ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರ ಬದಲಾವಣೆಗೆ ಕರೆ : “ದೇಣಿಗೆ ಕಳ್ಳರಿಗೆ ಶಿಕ್ಷೆಯಾಗಬೇಕೆಂದರೆ, ನೀವು ಸರ್ಕಾರವನ್ನು ಬದಲಾಯಿಸಬೇಕು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಗಂಭೀರ ಆರೋಪ : “ಬಿಜೆಪಿ ನಾಯಕರು ಭಗವಾನ್ ರಾಮನನ್ನು ದೇವರಂತೆ ಕಾಣುವುದಿಲ್ಲ, ಇಲ್ಲದಿದ್ದರೆ ಅವರು ಹೀಗೆ ಕಳ್ಳತನ ಮಾಡುತ್ತಿರಲಿಲ್ಲ. ರಾಮ ಅವರಿಗೆ ಅಧಿಕಾರ ನೀಡಿದ್ದರೂ, ಅವರು ಕೇವಲ ಅಧಿಕಾರ ಮತ್ತು ಹಣಕ್ಕಾಗಿ ಸನಾತನ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ವಿರುದ್ಧ ಪ್ರಶ್ನೆ : ಗೃಹ ಸಚಿವ ಅಮಿತ್ ಶಾ ಅವರು ರಾಮ ಮಂದಿರದ ಉದ್ಘಾಟನೆಯಾದಾಗಿನಿಂದ ಕಳೆದ 891 ದಿನಗಳಲ್ಲಿ ಒಮ್ಮೆಯೂ ಮಂದಿರಕ್ಕೆ ಭೇಟಿ ನೀಡಿಲ್ಲ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ. “ಅಮಿತ್ ಶಾ ಅವರು ತಮ್ಮ ಭಾಷಣಗಳಲ್ಲಿ ರಾಮ ಮಂದಿರದ ಹೆಸರನ್ನು 42ಕ್ಕೂ ಹೆಚ್ಚು ಬಾರಿ ಬಳಸಿದ್ದಾರೆ, ಆದರೆ ಮಂದಿರಕ್ಕೆ ಹೋಗಲು ಅವರಿಗೆ ಸಮಯವಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಆಪ್ ‘ನಿಜವಾದ ಸನಾತನಿ’ : ದೇಶದಲ್ಲಿ ಆಮ್ ಆದ್ಮಿ ಪಕ್ಷ ಮಾತ್ರ ಸನಾತನ ಧರ್ಮದ ಮೇಲೆ ನಿಜವಾದ ನಂಬಿಕೆ ಹೊಂದಿದೆ. ನಾವು ಉಚಿತ ತೀರ್ಥಯಾತ್ರೆಗಳನ್ನು ಆಯೋಜಿಸುತ್ತಿದ್ದೇವೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.
ನ್ಯಾಯಾಂಗ ಬಂಧನ
ಈ ನಡುವೆ, ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ತನಿಖೆಯ ನಂತರ, ಸ್ಥಳೀಯ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. (ಏಜೆನ್ಸಿಸ್)



