ಮೈಸೂರು : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಘಟನೆ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿರುವ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಒಳಅಸಮಾಧಾನ ತೀವ್ರಗೊಂಡಿದೆ. ಒಂದು ಕಡೆ ಕೇಂದ್ರ ಬಿಜೆಪಿ ನಾಯಕತ್ವ ರಾಜ್ಯದಿಂದ ರಾಜ್ಯಕ್ಕೆ ಸುತ್ತಿ ಪಕ್ಷ ಸಂಘಟನೆ, ಕಾರ್ಯಕರ್ತರ ಒಗ್ಗಟ್ಟು ಹಾಗೂ ಮತದಾರರ ತಲುಪುವ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿದ್ದರೆ, ಇನ್ನೊಂದು ಕಡೆ ಕರ್ನಾಟಕ ಬಿಜೆಪಿ ನಾಯಕತ್ವ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ಆರೋಪ ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ನಿರ್ಮಾಣವಾಗಿದ್ದರೂ ಅದನ್ನು ರಾಜಕೀಯವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಅಸಮಾಧಾನ ಇದೀಗ ಬಹಿರಂಗವಾಗಿ ಹೊರಹೊಮ್ಮಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ನಾಯಕರ ವಿರುದ್ಧವೇ ತೀವ್ರ ಟೀಕೆ ನಡೆಸುತ್ತಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಕಾರ್ಯಕರ್ತರು ಮುಕ್ತವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ರಾಜ್ಯದಲ್ಲಿ ಹೋರಾಟ ಕಾಣಿಸುತ್ತಿಲ್ಲ”, “ಜನರ ನಡುವೆ ಬಿಜೆಪಿ ಕಾಣಿಸುತ್ತಿಲ್ಲ”, “ಕೇವಲ ಟ್ವೀಟ್ ಮಾಡುವುದೇ ರಾಜಕಾರಣ ಅಲ್ಲ” ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಬದಲು ಕೇವಲ ಪತ್ರಿಕಾ ಹೇಳಿಕೆ ಮತ್ತು ಟ್ವೀಟ್ ಗಳಿಗೆ ರಾಜ್ಯ ನಾಯಕತ್ವ ಸೀಮಿತವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು “ನಾಯಕತ್ವ ನಿಭಾಯಿಸಲು ವಿಫಲವಾಗಿದ್ದೀರಿ, ಹುದ್ದೆಯಿಂದ ಕೆಳಗಿಳಿಯಿರಿ” ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಕೆಲವರು ರಾಜ್ಯ ಬಿಜೆಪಿ ಈಗ “adjustment politics” ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಬೇಕಾದ ಸಂದರ್ಭದಲ್ಲೂ ಮೃದು ಧೋರಣೆ ತಾಳಲಾಗುತ್ತಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ನಾಯಕ ಬಸನಗೌಡ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಹೋರಾಟದ ಮನೋಭಾವ ಇರುವ ನಾಯಕರಿಗೆ ಅವಕಾಶ ನೀಡಿದರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಪುನಃ ಬಲಿಷ್ಠವಾಗಲಿದೆ ಎಂಬ ಅಭಿಪ್ರಾಯ ಒಂದು ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲು ಕೂಡ ಕಾರ್ಯಕರ್ತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಜನರಲ್ಲಿ ಅಸಮಾಧಾನ ಇದ್ದರೂ ಅದನ್ನು ಮತಗಳಲ್ಲಿ ಪರಿವರ್ತಿಸಲು ಬಿಜೆಪಿ ವಿಫಲವಾಗಿದೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಇದೇ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆ ಗಮನ ಸೆಳೆದಿರುವುದು ಕರ್ನಾಟಕದ ಕಾರ್ಯಕರ್ತರಲ್ಲಿ ಹೋಲಿಕೆ ಮನೋಭಾವ ಹುಟ್ಟುಹಾಕಿದೆ. “ಅಲ್ಲಿ ಸಾಧ್ಯವಾದರೆ ಇಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?” ಎಂಬ ಪ್ರಶ್ನೆ ಕಾರ್ಯಕರ್ತರ ನಡುವೆ ಕೇಳಿಬರುತ್ತಿದೆ.
ಪ್ರಧಾನಮಂತ್ರಿ ನರೇದ್ರಾ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರು ನಿರಂತರವಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿರುವಾಗ, ಕರ್ನಾಟಕದಲ್ಲಿ ರಾಜ್ಯ ನಾಯಕತ್ವ ನೆಲಮಟ್ಟದ ಚಟುವಟಿಕೆಗಳಲ್ಲಿ ಹಿಂದುಳಿದಿದೆ ಎಂಬ ಮಾತು ಬಿಜೆಪಿ ಒಳಗೇ ಕೇಳಿಬರುತ್ತಿದೆ.
ಪಕ್ಷದ ಕಾರ್ಯಕರ್ತರು ಹೋರಾಟಮಯ ರಾಜಕೀಯ ನಿರೀಕ್ಷಿಸುತ್ತಿದ್ದಾರೆ. ಆದರೆ ರಾಜ್ಯ ನಾಯಕತ್ವ ಆ ರೀತಿಯ ಚುರುಕು ಪ್ರದರ್ಶಿಸುತ್ತಿಲ್ಲ ಎಂಬ ಆರೋಪ ಮುಂದುವರಿದಿದೆ.
ಕರ್ನಾಟಕ ಬಿಜೆಪಿಯಲ್ಲಿ ಈಗ ಕಾಣಿಸುತ್ತಿರುವ ಅಸಮಾಧಾನ ಕೇವಲ ಸಾಮಾಜಿಕ ಜಾಲತಾಣಗಳ ಮಟ್ಟಕ್ಕೆ ಸೀಮಿತವಾಗಿರುತ್ತದೆಯೇ ಅಥವಾ ಅದು ಸಂಘಟನೆ ಮೇಲೆಯೂ ಪರಿಣಾಮ ಬೀರುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಆದರೆ ಕಾರ್ಯಕರ್ತರ ಮನೋಭಾವದಲ್ಲಿ ಉಂಟಾಗಿರುವ ಅಸಮಾಧಾನವನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆಯ ಸಂಭ್ರಮದ ನಡುವೆ ಕರ್ನಾಟಕ ಬಿಜೆಪಿ ಒಳಗೆ ನಾಯಕತ್ವದ ವಿರುದ್ಧದ ಪ್ರಶ್ನೆಗಳು ಇದೀಗ ಬಹಿರಂಗ ಚರ್ಚೆ.



